ಹೆತ್ತ ಒಂದೂವರೆ ವರ್ಷದ ಮಗುವನ್ನು ಕೊಂದಿದ್ದ ತಂದೆಗೆ ಮರಣ ದಂಡನೆ ಶಿಕ್ಷೆ | Janata news
ಗದಗ : ಹೆತ್ತ ಮಗುವನ್ನೇ ಕೊಂದಿದ್ದ ಪಾಪಿ ತಂದೆಗೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ ವಿ ಪಾಟೀಲ್ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ರೋಣ ತಾಲೂಕಿನ ಹುಲ್ಲೂರ ಗ್ರಾಮದ ಅಪರಾಧಿ ಪ್ರಶಾಂತಗೌಡ ಪಾಟೀಲ್ ಒಂದೂವರೆ ವರ್ಷದ ಪುಟ್ಟ ಮಗುವನ್ನು ಡ್ನಾಪ್ ಮಾಡಿ ಕೊಲೆ ಮಾಡಿದ್ದ. ಸದ್ಯ ಈತನ ಈ ಕೃತ್ಯಕ್ಕೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ನೀಡಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ನಿವಾಸಿ ಅಪರಾಧಿ 2013 ರಲ್ಲಿ ಓರ್ವ ಮುಸ್ಲಿಂ ಮಹಿಳೆ ಪ್ರೀತಿಸಿ ಮದುವೆಯಾಗಿದ್ದ, ಕೆಲವು ತಿಂಗಳ ನಂತರ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿ ದೋಖಾ ಮಾಡಿದ್ದ. ನಿತ್ಯ ಕಿರುಕುಳದಿಂದ ನೊಂದ ಪತ್ನಿ ಮಹಿಳಾ ಸಾಂತ್ವನ ಕೇಂದ್ರ ಮೊರೆ ಹೋಗಿದ್ದಳು. ಈ ವೇಳೆ ಒಂದು ಹೆಣ್ಣು ಮಗು ಸಹ ಜನನವಾಗಿತ್ತು. ನಂತರ ಪತ್ನಿ ಕರೆಸಿ ಬುದ್ಧಿ ಹೇಳಿದ ಬಳಿಕ ಚೆನ್ನಾಗಿ ಜೀವನ ಮಾಡುವುದಾಗಿ ತಪ್ಪೊಪ್ಪಿಕೊಂಡಿದ್ದ.
ನಂತರ ರೋಣ ಪಟ್ಟಣದ ಸಿದ್ಧಾರೂಢ ಮಠದ ಬಳಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಕೆಲವು ತಿಂಗಳ ನಂತರ ಸಾಂತ್ವನ ಕೇಂದ್ರ ಕೇಸ್ ಹಿಂಪಡೆಯುವಂತೆ ಆಗಾಗ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆಗ ನೊಂದ ಪತ್ನಿ ಮಗುವಿಗೆ ಜೀವನಾಂಶ ಬೇಡಿ ಕೋರ್ಟ್ ಮೊರೆ ಹೋಗಿದ್ದಳು.
2015ರ ಏಪ್ರಿಲ್ 6ರಂದು ಪ್ರಶಾಂತಗೌಡ ತನ್ನ ಸ್ವಂತ ಮಗುವನ್ನೇ ಅಪಹರಿಸಿದ್ದ. ಏನು ತಿಳಿಯದ ಒಂದೂವರೆ ವರ್ಷದ ಪುಟ್ಟ ಮಗುವನ್ನು ಅಪಹರಿಸಿ ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕತ್ತುಹಿಸುಕಿ ಹತ್ಯೆ ಮಾಡಿ ಬಳಿಕ ಮೃತದೇಹ ಸುಟ್ಟುಹಾಕಿದ್ದ. ಪ್ರಕರಣ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.