ದಾಳಿ ನಡೆಸಿದ ಹೆಜ್ಜೇನು, ಉಪಪ್ರಾಚಾರ್ಯ, ವಿದ್ಯಾರ್ಥಿಗಳು ಸೇರಿ 10 ಜನ ಆಸ್ಪತ್ರೆಗೆ ದಾಖಲು! | ಜನತಾ ನ್ಯೂಸ್
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಗಮಖಂಡಿಯಲ್ಲಿ ಬಿಸಿಲಿನ ತಾಪ ತಾಳಲಾರದೆ ಗೂಡಿನಿಂದ ಎದ್ದ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ತರಗತಿಗೆ ತೆರಳುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ 9 ವಿದ್ಯಾರ್ಥಿಗಳು, ಪ್ರಾಚಾರ್ಯರು ಗಾಯಗೊಂಡಿದ್ದಾರೆ. ಜಮಖಂಡಿ ನಗರದ ಸರ್ಕಾರಿ ಪಿಬಿ ಹೈಸ್ಕೂಲ್ನಲ್ಲಿ ಈ ಘಟನೆ ನಡೆದಿದೆ.
ಜಮಖಂಡಿಯ ಸರ್ಕಾರಿ ಪಿಬಿ ಪ್ರೌಢಶಾಲೆ ಆವರಣದಲ್ಲಿರುವ ಮರಗಳಲ್ಲಿ ಹೆಜ್ಜೇನು ಗೂಡು ಕಟ್ಟಿಕೊಂಡಿದ್ದವು. ಆದರೆ, ಇಂದು ಬೆಳಗ್ಗೆ ಬಿಸಿಲಿನ ತಾಪ ತಾಳಲಾರದೇ ಗೂಡುಬಿಟ್ಟು ಎದ್ದ ಹೆಜ್ಜೇನುಗಳು ಎಲ್ಲರನ್ನೂ ಗಲಿಬಿಲಿಗೊಳಿಸಿವೆ. ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಆಗಮಿಸುವ ಹೊತ್ತಿಗೆ ಸರಿಯಾಗಿ ದಾಳಿ ನಡೆಸಿದ ಹೆಜ್ಜೇನುಗಳು ಓರ್ವ ಉಪಪ್ರಾಚಾರ್ಯ ಮತ್ತು 9 ವಿದ್ಯಾರ್ಥಿಗಳನ್ನು ಗಾಯಗೊಳಿಸಿವೆ.
ಸದ್ಯ ಜೇನು ಉಪಪ್ರಾಚಾರ್ಯ ಎನ್.ಬಿ.ಬಿರಾದಾರ ಹಾಗೂ 6 ವಿದ್ಯಾರ್ಥಿಗಳು, 3 ವಿದ್ಯಾರ್ಥಿನಿಯರು ಸೇರಿ ಒಟ್ಟು 10 ಜನರನ್ನು ಕಚ್ಚಿವೆ. ಸದ್ಯ ಗಾಯಾಳುಗಳನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.