ಬಳ್ಳಾರಿಯಲ್ಲಿ ಮೇ 19ರಿಂದ ಮೇ 24ರವರೆಗೆ 5 ದಿನ ಸಂಪೂರ್ಣ ಲಾಕ್ಡೌನ್! | ಜನತಾ ನ್ಯೂಸ್
ಬಳ್ಳಾರಿ : ಜಿಲ್ಲೆಯಾದ್ಯಂತ ಮೇ.19ರ ಬೆಳಿಗ್ಗೆ 10ರಿಂದ 24ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಆನಂದ್ಸಿಂಗ್ ಮತ್ತು ಜಿಲ್ಲಾಧಿಕಾರಿ ಸಂಪೂರ್ಣ ಲಾಕ್ಡೌನ್ ಮಾಹಿತಿ ನೀಡಿದರು.
ಸೋಂಕಿನ ಪ್ರಮಾಣ ಹೆಚ್ಚಳ, ತುರ್ತು ಆಮ್ಲಜನಕ, ವೆಂಟಿಲೇಟರ್ ಸೌಕರ್ಯಕ್ಕೆ ಹೆಚ್ಚಿದ ಬೇಡಿಕೆ, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿದ ಒತ್ತಡದ ನಿರ್ವಹಣೆ ಹಾಗೂ ಸೋಂಕಿನ ನಿಯಂತ್ರಣದ ಸಲುವಾಗಿ ಸಂಪೂರ್ಣ ಲಾಕ್ಡೌನ್ ಅನಿವಾರ್ಯವಾಗಿದೆ. ಔಷಧಿ ಮಳಿಗೆಗಳು ಪೂರ್ಣಾವಧಿ ಕಾರ್ಯನಿರ್ವಹಿಸಬಹುದು.
ಈ ಅವಧಿಯಲ್ಲಿ ಹಾಲಿನ ಉತ್ಪನ್ನದ ಮಳಿಗೆಗಳು, ಮೊಟ್ಟೆ ಅಂಗಡಿಗಳು, ಕೃಷಿಗೆ ಸಂಬಂಧಿಸಿದ ಅಂಗಡಿಗಳು ಮಾತ್ರ ಬೆಳಿಗ್ಗೆ 6ರಿಂದ 10ಗಂಟೆಯವರೆಗಷ್ಟೇ ಕಾರ್ಯನಿರ್ವಹಿಸಬಹುದು. ಈ ಸಮಯದಲ್ಲಿ ಮಾತ್ರ ಗ್ರಾಹಕರು ಖರೀದಿಸಬೇಕು.
ಹೋಟೆಲ್ಗಳಿಗೆ ಗ್ರಾಹಕರು ಹೋಗುವಂತಿಲ್ಲ. ಆದರೆ ಹೋಟೆಲ್ಗಳು ಪಾರ್ಸಲ್ಗಳನ್ನು ಮನೆಗಳಿಗೆ ಪೂರೈಸಬಹುದು. ಕಾರ್ಮಿಕರು ಕಾರ್ಖಾನೆಗಳ ಆವರಣದಲ್ಲೇ ಕಡ್ಡಾಯವಾಗಿ ಇರಬೇಕು. ಕಟ್ಟಡ ನಿರ್ಮಾಣ ಸ್ಥಳದಲ್ಲಿಯೇ ಕಾರ್ಮಿಕರು ವಾಸ್ತವ್ಯ ಹೂಡಬೇಕು ಎಂದು ಸ್ಪಷ್ಟಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಗಟು ಮಾರಾಟಗಾರರು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಲು ಹಾಗೂ ಬೇರೆಡೆ ಸಾಗಿಸಲು ನಿರ್ಬಂಧವಿಲ್ಲ. ಅಡುಗೆ ಅನಿಲ ಸಿಲಿಂಡರ್ ವಿತರಣೆಯನ್ನು ಮಾಡಬಹುದು. ಅಗತ್ಯ ಸೇವೆಗಳಾದ ಆಂಬ್ಯುಲೆನ್ಸ್, ಅಗ್ನಿ ಶಾಮಕ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ಬ್ಯಾಂಕ್, ವಿದ್ಯುತ್, ಆಮ್ಲಜನಕ ಉತ್ಪಾದನಾ ಘಟಕ, ಪೆಟ್ರೋಲ್ ಪಂಪ್, ನೀರು ನೈರ್ಮಲ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ ಎಂದರು.
ಲಾಕ್ಡೌನ್ ಅವಧಿಯಲ್ಲಿ ಕಿರಾಣಿ ಅಂಗಡಿಗಳು, ದಿನಸಿ, ಹಣು ತರಕಾರಿಗಳು, ಮಾಂಸ ಮತ್ತು ಮೀನು, ಮದ್ಯದ ಅಂಗಡಿಗಳು, ಪಶು ಆಹಾರದ ಅಂಗಡಿಗಳು ಹಾಗೂ ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕೆ ಬಹಳಷ್ಟು ಪ್ರಯಾಸ ಮಾಡುತ್ತಿದ್ದೇವೆ. ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.45ಕ್ಕಿಂತ ಹೆಚ್ಚಿದ್ದು, ಸೋಂಕಿತರ ಸಂಖ್ಯೆ ತೀವ್ರಗೊಂಡಿದೆ. ಆಮ್ಲಜನಕ ಹಾಗೂ ವೆಂಟಿಲೇಟರ್ಯುಕ್ತ ಹಾಸಿಗೆಗಳ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಸೋಂಕಿನ ಪ್ರಕರಣಗಳಿಗೆ ವೈದ್ಯಕೀಯ ಮೂಲ ಸೌಕರ್ಯಗಳನ್ನು ಒದಗಿಸುವುದರಲ್ಲಿ ಸಾಕಷ್ಟು ಒತ್ತಡ ಉಂಟಾಗುತ್ತಿದೆ. ಮುಖ್ಯಮಂತ್ರಿಗಳೊಂದಿಗೆ ಸೋಮವಾರ ನಡೆಸಿದ ವಿಡಿಯೋ ಸಂವಾದದಲ್ಲಿ ನೀಡಲಾದ ನಿರ್ದೇಶನಗಳಂತೆ ಹಾಗೂ ಜಿಲ್ಲೆಯಲ್ಲಿನ ತಜ್ಞರೊಂದಿಗೆ ಸಮಾಲೋಚಿಸಿ ಕೊರೊನಾ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.