ಅತ್ತ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆ ಮಾಡಿಕೊಂಡ ಮಗಳು ಇತ್ತ ಹೆತ್ತವರ ಸಾವು! | ಜನತಾ ನ್ಯೂಸ್
ರಾಮನಗರ : ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆ ಆಗಿದ್ದಕ್ಕೆ ಮನನೊಂದ ತಂದೆ-ತಾಯಿ ಇಬ್ಬರೂ ನೇಣುಬಿಗಿದುಕೊಂಡು ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೆಂಕ್ಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ನಿನ್ನೆಯಷ್ಟೇ ಮಗಳು ಪ್ರೀತಿಸಿದ ಯುವಕನನ್ನು ಪೋಷಕರ ವಿರೋಧ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಇದರಿಂದ ನೊಂದ ತಂದೆ-ತಾಯಿ ಇಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ.
ಎಚ್.ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ (50) ಮತ್ತು ಶೈಲಜಾ(42) ಮೃತ ದಂಪತಿ. ಇವರ ಪುತ್ರಿ ಶಿಲ್ಪಾ ಮತ್ತು ಇದೇ ಗ್ರಾಮದ ಪುನೀತ್ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು.
ಹಲವು ಸಲ ಮಗಳ ಪ್ರೇಮ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ನಿನ್ನೆ ದಂಪತಿಯ ಮಗಳು ಶಿಲ್ಪಾ ತಮ್ಮದೇ ಗ್ರಾಮದ ಪುನೀತ್ ಎಂಬ ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು.
ಮನಸು ಬದಲಿಸಿಕೊಂಡಿದ್ದೇನೆ ಎಂದು ಹೇಳಿದ್ದ ಮಗಳು ಏಕಾಏಕಿ ಮನೆಯಿಂದ ಪರಾರಿಯಾಗಿ ಮದುವೆ ಮಾಡಿಕೊಂಡಿದ್ದು ಪೋಷಕರಿಗೆ ಆಘಾತ ತಂದಿತ್ತು. ಇದರಿಂದ ಮನನೊಂದು ದಂಪತಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ರಮೇಶ್ ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. ಹಲವು ಬಾರಿ ಗ್ರಾಮ ಪಂಚಾಯ್ತಿ ಸದಸ್ಯನಾಗಿಯೂ ಆಯ್ಕೆಯಾಗಿದ್ದರು. ಈ ಕಾರಣಕ್ಕಾಗಿ ಗ್ರಾಮದಲ್ಲಿ ಸಣ್ಣ-ಪುಟ್ಟ ಗಲಾಟೆ ನಡೆದ ಸಂದರ್ಭದಲ್ಲಿ ರಮೇಶ್ ನ್ಯಾಯ ಪಂಚಾಯ್ತಿ ಮಾಡುತ್ತಿದ್ದರು. ಈಗ ಮಗಳ ಪ್ರೇಮ ವಿವಾಹದಿಂದ ಮಾನ ಹೋಯಿತು ಎಂದು ಭಾವಿಸಿದ ರಮೇಶ್ ಪತ್ನಿ ಸಮೇತರಾಗಿ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಗ್ರಾಮಸ್ಥರು ಯಾರಿಗೂ ಹೇಳದೆ ಅಂತ್ಯಕ್ರಿಯೆ ಮುಗಿಸುವ ಪ್ಲಾನ್ ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಎಂ.ಕೆ.ದೊಡ್ಡಿ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿದ್ದಾರೆ.
ಯಾರೂ ದೂರು ಕೊಡದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರಪರೀಕ್ಷೆಗೆ ಕಳುಸಿಕೊಟ್ಟಿದ್ದಾರೆ. ಎಂ.ಕೆ ದೊಡ್ಡಿ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.