ಎರಡು ಕಂದಮ್ಮಗಳ ಜೀವ ತೆಗೆದ ಜೋಕಾಲಿ? ಸಂಶಯಾಸ್ಪದ ಸಾವು! | ಜನತಾ ನ್ಯೂಸ್
ಕೊಡಗು : ಜೋಕಾಲಿಯೇ ಉರುಳಾಗಿ ಎರಡು ಕಂದಮ್ಮಗಳ ಜೀವ ತೆಗೆದ ಮನಕಲಕುವ ದುರ್ಘನೆ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಉಂಜಿಗನಹಳ್ಳಿಯ ಕಾಂತರಾಜು ಮತ್ತು ಜಯಂತಿ ದಂಪತಿಯ ಮಕ್ಕಳಾದ 14 ವರ್ಷದ ಮಣಿಕ್ ಶಾ ಮತ್ತು 12 ವರ್ಷದ ಪೂರ್ಣೇಶ್ ದಾರುಣವಾಗಿ ಜೀವ ಬಿಟ್ಟಿದ್ದಾರೆ.
ಇಂದು ಸಂಜೆ ಮನೆಯಲ್ಲಿ ಇವರು ಇಬ್ಬರೇ ಇದ್ದರು. ಈ ವೇಳೆ ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಜೋಕಾಲಿ ಕೊರಳಿಗೆ ಉರುಳಾಗಿ ಸುತ್ತಿಕೊಂಡ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಕದಲ್ಲಿರುವ ತಮ್ಮ ಅಜ್ಜಿ ಅಜ್ಜನ ಮನೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ತೋಟದಿಂದ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಾಂತರಾಜು ಮತ್ತು ಜಯಂತಿ ಇಬ್ಬರು ಕೂಲಿ ಕಾರ್ಮಿಕರಾಗಿದ್ದು, ಎಂದಿನಂತೆ ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೂಲಿಗೆ ಹೋಗಿದ್ದಾರೆ. ತಾತ ರಾಮಯ್ಯ ಕೂಡ ಕೂಲಿ ಮಾಡುವವರಾಗಿದ್ದು ಕೂಲಿಗೆ ಹೋಗಿದ್ದಾರೆ.
ಈ ವೇಳೆ ಅಕ್ಕ ತಮ್ಮ ಇಬ್ಬರು ತಮ್ಮ ಬೇಸರ ನೀಗಿಸಿಕೊಳ್ಳಲು ತಮ್ಮ ತಾಯಿಯ ಸೀರೆಯಿಂದ ಮನೆಯಲ್ಲೇ ಜೋಕಾಲಿ ಕಟ್ಟಿ ಆಟವಾಡಲು ಹೋಗಿದ್ದಾರೆ. ಆದರೆ ಅದೇ ಸೀರೆಯ ಜೋಕಾಲಿ ಇಬ್ಬರ ಕೊರಳಿಗೆ ಸುತ್ತಿಕೊಂಡಿದೆ. ಕೊರಳಿಗೆ ಸುತ್ತಿಕೊಳ್ಳುತ್ತಿದ್ದಂತೆ ಆತಂಕಕ್ಕೆ ಒಳಗಾದ ಮಕ್ಕಳು ಒದ್ದಾಡಿರಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ ಯಾರು ಮನೆಯಲ್ಲಿ ಇಲ್ಲದಿದ್ದರಿಂದ ಉಸಿರುಗಟ್ಟಿ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ತಂದೆ ತಾಯಿಗಳು ಮನೆಗೆ ಬರುವುದಕ್ಕೂ ಮೊದಲೇ ತಾತ ರಾಮಯ್ಯ ಕೂಲಿ ಮುಗಿಸಿಕೊಂಡು ಮನೆಗೆ ಬಂದು ದಾರುಣ ಘಟನೆಯನ್ನು ನೋಡಿದ್ದಾರೆ. ಈ ವೇಳೆ ಇಬ್ಬರು ಮಕ್ಕಳ ಕೊರಳಿಗೆ ಸೀರೆ ಸುತ್ತಿಕೊಂಡು ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಾರೆ. ಈ ಹೃದಯ ವಿದ್ರಾವಕ ದೃಶ್ಯವನ್ನು ಕಂಡ ತಾತ ರಾಮಯ್ಯ ಕೂಗಾಡುತ್ತಲೇ ಎಚ್ಚೆತ್ತುಕೊಂಡು ತಕ್ಷಣವೇ ಕುಡುಗೋಲಿನಿಂದ ಮಕ್ಕಳ ಕೊರಳಿಗೆ ಸುತ್ತಿಕೊಂಡಿದ್ದ ಸೀರೆಯನ್ನು ತುಂಡರಿಸಿದ್ದಾರೆ.
ಮನೆಯೊಳಗೆ ಜೋಕಾಲಿ ಕಟ್ಟಿಕೊಂಡು ಆಟವಾಡುತ್ತಿದ್ದರು. ಜೋಕಾಲಿ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾರೆ ಎಂದು ಗಿರೀಶ್ ಅವರು ಸೋಮವಾರಪೇಟೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.