ಸರ್ಕಾರಿ ಆಸ್ಪತ್ರೆಯ ಕಿಟಕಿಯಲ್ಲಿ ನವಜಾತ ಶಿಶು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ! | ಜನತಾ ನ್ಯೂಸ್
ಚಿಕ್ಕಬಳ್ಳಾಪುರ : ಹೆಣ್ಣು ಮಗುವೊಂದನ್ನು ಕತ್ತಿಗೆ ಟೈನ್ಹುರಿಯಿಂದ ನೇಣುಬಿಗಿದು ಶೌಚಾಲಯದ ಕಿಟಕಿಯಲ್ಲಿ ಎಸೆದಿರುವ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆ ಎಂತಹ ಕಲ್ಲು ಹೃದಯವನ್ನೂ ಹಿಂಡುವಂತಿದೆ.
ನವಜಾತ ಶಿಶುವೊಂದನ್ನು ಆಸ್ಪತ್ರೆಯ ಬಚ್ಚಲು ಕೋಣೆಯ ಕಿಟಕಿಗೆ ನೇಣು ಹಾಕಿ ಕೊಂದಿರುವ ಅತ್ಯಂತ ಅಮಾನವೀಯ ಘಟನೆ ನಡೆದಿದೆ.
ಆಗತಾನೇ ಹುಟ್ಟಿದ ಮಗುವನ್ನು ಬಚ್ಚಲ ಕೋಣೆಯ ಕಿಟಕಿಗೆ ನೇತುಹಾಕಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯನ್ನು ಸ್ವಚ್ಚಗೊಳಿಸುತ್ತಿದ್ದಾಗ ಬೆಳಗ್ಗೆ 8 ಗಂಟೆ ಸಮಯದಲ್ಲಿ ಬಚ್ಚಲಿನ ಬಾಗಿಲು ಬಂದ್ ಆಗಿತ್ತು, ಸ್ವಚ್ಚಗೊಳಿಸಲೆಂದು ಎರಡು ಮೂರು ಸಲ ಹೋದಾಗಲೂ ಬಾಗಿಲು ಹಾಕಿತ್ತು.
ನಂತರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೋಗಿ ನೋಡಿದಾಗ ಅಲ್ಲಿ ಹೆರಿಗೆಯಾದ ವಾಸನೆ ಬಂದಿದೆ. ತಕ್ಷಣ ಸಿಬ್ಬಂದಿ ಆಚೀಚೆ ನೋಡಿ ಕಣ್ಣೆತ್ತಿ ಗಮನ ಹರಿಸಿದಾಗ ಆಗ ತಾನೆ ಜನಿಸಿದ ಹೆಣ್ಣು ನವಜಾತ ಶಿಶು ನೇತಾಡುತ್ತಿರುವುದು ಕಂಡುಬಂದಿದೆ.
ಸಿಬ್ಬಂದಿ ಕೂಡಲೇ ವಿಚಾರವನ್ನು ವೈದ್ಯರ ಗಮನಕ್ಕೆ ತಂದು ಪರಿಶೀಲನೆ ಮಾಡಿ ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಮಗು ಅಷ್ಟರಲ್ಲೇ ಪ್ರಾಣ ಬಿಟ್ಟಿತ್ತು ಎಂದು ತಿಳಿದು ಬಂದಿದೆ.
ಬಹುಶಃ ಹೆಣ್ಣು ಮಗು ಎಂಬ ಕಾರಣಕ್ಕೆ ಹೀಗೆ ಮಾಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ, ಹೆರಿಗೆ ನೋವು ಬಂದ ಕೂಡಲೇ ಆಸ್ಪತ್ರೆಗೆ ಬಂದು ಬಾತ್ರೂಮ್ ಒಳಗೆ ತೆರಳಿ ಹೆರಿಗೆ ಮಾಡಿಕೊಂಡಿದ್ದಾರೆ. ಆದರೆ ಹುಟ್ಟಿದ ಮಗು ಹೆಣ್ಣು ಎಂಬ ಕಾರಣಕ್ಕೆ ಶಿಶುವಿನ ಕುತ್ತಿಗೆಗೆ ನೇಣು ಬಿಗಿದು ಒಳಗಡೆಯಿಂದ ಹೊರಗಡೆ ತಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಮಗು ಕಿಟಕಿಯಲ್ಲಿ ಆಚೆ ತೂರಿಲ್ಲವಾದ್ದರಿಂದ ಅಲ್ಲೇ ಬಿಟ್ಟು ಗಾಬರಿಯಲ್ಲಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಮಾಡುತ್ತಿದ್ದು ಆಸ್ಪತ್ರೆಯ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ.