ಭಗ್ನ ಪ್ರೇಮಿಯಿಂದ ಪ್ರೇಯಸಿ ಮೇಲೆ ಹಲ್ಲೆ | ಜನತಾ ನ್ಯೂಸ್
ಗೋಕರ್ಣ : ಪ್ರೀತಿಸಿ ಕೈಕೊಟ್ಟ ಹುಡುಗಿ ಫೋಟೋ ನೋಡಿ ಕೊಲ್ಲಲು ಕುಡ್ಲೆ ಬೀಚ್ಗೆ ಬಂದಿದ್ದ ಮಾಜಿ ಪ್ರೇಮಿ ಮಾಜಿ ಪ್ರಿಯತಮೆ ಮೇಲೆ ಮಾರಣಾಂತಿಕ ಹಲ್ಲೆಮಾಡಿ ಪರಾರಿಯಾಗಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ತನ್ನ ಬಿಟ್ಟು ಹೋಗಿದ್ದ ಪ್ರೇಯಸಿಯ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ನೋಡಿ ಆಕೆಯಿರುವ ಸ್ಥಳ ಪತ್ತೆ ಹಚ್ಚಿ ಬಂದು ಆಕೆಯ ಮೇಲೆ ಈ ದುಷ್ಕೃತ್ಯ ಎಸಗಿದ್ದಾನೆ. ಈ ಘಟನೆ ಬಳಿಕ ವೇಷ ಮರೆಸಿಕೊಂಡು ಪುಣೆಯಲ್ಲಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುಲೈ 7ರಂದು ಗೋಕರ್ಣದ ಕುಡ್ಲೆ ಬೀಚ್ಗೆ ಸ್ನೇಹಿತರ ಜೊತೆ ಬಂದಿದ್ದ ಹರ್ಯಾಣ ಮೂಲದ ಪ್ರವಾಸಿಯೊಬ್ಬಳ ಮೇಲೆ ಅನಾಮಿಕನೊಬ್ಬ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಳು.
ಪ್ರಕರಣದ ಗಂಭೀರತೆ ಅರಿತ ಪೊಲೀಸರು ಆರೋಪಿಯ ಪತ್ತೆಗೆ ಮುಂದಾದರು. ತನಿಖೆ ಕೈಗೊಂಡ ಪೊಲೀಸರಿಗೆ ಈ ಪ್ರಕರಣದಲ್ಲಿ ಕುತೂಹಲಕಾರಿಯ ಕಥೆ ಇರುವುದು ತಿಳಿದಿದೆ. ಹಲ್ಲೆಗೊಳಗಾದವಳು ಹರ್ಯಾಣ ಮೂಲದ ಮಹಿಳೆಯಾದರೆ ಹಲ್ಲೆ ಮಾಡಿದಾತ ಮಹಾರಾಷ್ಟ್ರ ಪುಣೆ ಮೂಲದ ತುಷಾರ್ ಮರಾಠೆ ಎಂಬವ. ಇಬ್ಬರು ಪರಿಚಿತರಾಗಿದ್ದು, ಮಾಜಿ ಪ್ರೇಮಿಗಳು.
ಹಲ್ಲೆಗೊಳಗಾದ ಮಹಿಳೆ ಮತ್ತು ತುಷಾರ್ ಕಳೆದೆರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಪುಣೆಯಲ್ಲಿ ಒಂದೆ ಕಡೆ ಕೆಲಸ ಮಾಡುವಾಗ ಸ್ನೇಹ ಪ್ರೇಮವಾಗಿ ಬದಲಾಗಿ ಪ್ರೀತಿ ಮಾಡಲು ಶುರು ಮಾಡಿದ್ದರು. ಆದರೆ, ಅದು ಯಾವುದೋ ಕಾರಣಕ್ಕೆ ಇವರ ಪ್ರೀತಿ ಮುರಿದು ಬಿದ್ದಿದೆ. ಇದೇ ಹೊತ್ತಿಗೆ ಯುವತಿ ಕೂಡ ಪುಣೆ ಬಿಟ್ಟು ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಬಂದಿದ್ದು, ಆತನ ಜೊತೆಗಿನ ಎಲ್ಲಾ ಸಂಪರ್ಕವನ್ನು ಕಟ್ ಮಾಡಿದ್ದಳು. ಆದರೆ, ತುಷಾರ್ ಮಾತ್ರ ಪ್ರೇಯಸಿ ತನಗೆ ಮೋಸ ಮಾಡಿದ್ದಾಳೆ. ಆಕೆಗೆ ತಕ್ಕ ಪಾಠ ಕಲಿಸಬೇಕು ಎಂದು ಹಗೆ ಸಾಧಿಸುತ್ತಿದ್ದ.
ಸೆಲ್ಫಿ ಜೀವಕ್ಕೆ ಸಂಚಕಾರ ತಂದಿತು ಮಹಿಳೆ ಗೋಕರ್ಣದ ಕುಡ್ಲೆ ಬೀಚ್ನಲ್ಲಿ ಇರುವುದು ಮಾಜಿ ಪ್ರೇಮಿಗೆ ತಿಳಿದಿದ್ದು ಸೆಲ್ಫಿ ಮೂಲಕ. ಸೆಲ್ಫಿಯನ್ನು ಆಕೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಳು. ಇದನ್ನು ನೋಡಿದ ಮಾಜಿ ಪ್ರೇಮಿ ಗೋಕರ್ಣಕ್ಕೆ ಬಂದು ಮಾಜಿ ಪ್ರೇಯಸಿ ಇದ್ದ ಹೋಟೆಲ್ನಲ್ಲಿಯೇ ರೂಂ ಪಡೆದಿದ್ದ.
ಮಹಿಳೆ ಗೆಳತಿಯರು ಊಟಕ್ಕೆ ಹೋದಾಗ ರೂಂನಲ್ಲಿ ಒಬ್ಬಳೇ ಇರುವುದನ್ನು ಖಾತರಿಪಡಿಸಿಕೊಂಡು ದಾಳಿ ಮಾಡಿದ್ದ. ಹೇರ್ ಡ್ರೈಯರ್ ವೈರ್ನಿಂದ ಕುತ್ತಿಗೆ ಬಿಗಿದು, ಪೆನ್ನಿಂದ ಕಣ್ಣು ಮತ್ತು ಮುಖಕ್ಕೆ ಚುಚ್ಚಿದ್ದ. ಮುಖಕ್ಕೆ ಹೊಡೆದು, ದಿಂಬಿನಿಂದ ಉಸಿರುಗಟ್ಟಿಸಿದಾಗ ಮಹಿಳೆ ಮೂರ್ಚೆಹೋದಳು. ಆಕೆ ಸತ್ತಿದ್ದಾಳೆ ಎಂದು ಆತ ಪರಾರಿಯಾಗಿದ್ದ. ಬಳಿಕ ಆಕೆಯನ್ನು ಅವರ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲಿಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಡಿ.ವೈ.ಎಸ್ಪಿ ಬೆಳ್ಳಿಯಪ್ಪ ಅವರ ನೇತೃತ್ವದ ಒಂದು ಮತ್ತು ಕುಮಟಾ ಸಿ.ಪಿ.ಐ ಶಿವಪ್ರಕಾಶ ನಾಯ್ಕ ಅವರ ನೇತೃತ್ವದ ಇನ್ನೊಂದು ತಂಡ ರಚಿಸಿ ಮಹಾರಾಷ್ಟ್ರ ಪುಣೆ ಕಡೆಗೆ ತನಿಖೆಗೆ ಕಳುಹಿಸಲಾಗಿತ್ತು. ಆರೋಪಿಯ ಮೊಬೈಲ್ ಮೂಲಕ ಪತ್ತೆಹಚ್ಚಿದ ಪೊಲೀಸರು ತಲೆ ಬೋಳಿಸಿಕೊಂಡು ವೇಷ ಬದಲಾಯಿಸಿಕೊಂಡಿದ್ದ ಆರೋಪಿಯನ್ನು ಪುಣೆಯಲ್ಲಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.