ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂಸ್
ದಾವಣಗೆರೆ : ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಪ್ರಕರಣ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮದಲ್ಲಿ ವರದಿಯಾಗಿದೆ.
ಚನ್ನಗಿರಿ ತಾಲ್ಲೂಕು ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಪುಷ್ಪಾ ಅಲಿಯಾಸ್ ಕುಸುಮಾ(30) ಮತ್ತು ಕೆರೆಬಿಳಚಿ ಗ್ರಾಮದ ಪ್ರಿಯಕರ ಪ್ರಭುಲಿಂಗಪ್ಪ(35) ಬಂಧಿತರು ಎಂದು ಹೇಳಲಾಗಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಲೋಕೇಶಪ್ಪ(38)ನನ್ನು ಕೊಲೆ ಮಾಡಲಾಗಿತ್ತು. ಜುಲೈ 27 ರಂದು ಆರೋಪಿಗಳು ಕೊಲೆ ಮಾಡಿದ್ದರು. ಮನೆಯಲ್ಲಿಯೇ ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದರು.
ಆರೋಪಿ ಪತ್ನಿಯ ಪ್ರಿಯಕರ ಪ್ರಭು ಲಿಂಗಪ್ಪ, ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ನಿವಾಸಿಯಾಗಿದ್ದು, ಕುಸುಮಳೊಂದಿಗೆ ಅಕ್ರಮಸಂಬಂಧ ಇಟ್ಟುಕೊಂಡಿದ್ದನಂತೆ. ಮೃತ ಲೋಕೇಶಪ್ಪ ಹಾಗು ಆರೋಪಿ ಪತ್ನಿ ಕುಸುಮ ಇಬ್ಬರ ನಡುವೆ ಸಾಕಷ್ಟು ಬಾರಿ ಗಲಾಟೆಯಾಗಿತ್ತಂತೆ. ಗ್ರಾಮಸ್ಥರು ರಾಜೀ ಪಂಚಾಯಿತಿ ಮಾಡಿದ್ರೂ ಪ್ರಯೋಜನ ಆಗಿರಲಿಲ್ಲ. ಈ ಮಧ್ಯೆ ಕುಸುಮ ಪ್ರಭು ಎಂಬತಾನೊಂದಿಗೆ ಅಕ್ರಮಸಂಬಂಧ ಬೆಳೆಸಿಕೊಂಡಿದ್ದಳಂತೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನನ್ನು ಇಬ್ಬರು ಸೇರಿ ಕತ್ತು ಹಿಸುಕಿ ಕಳೆದ 27ರ ತಡರಾತ್ರಿ ಮನೆಯಲ್ಲೇ ಕೊಲೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಕೊಲೆ ಬಳಿಕ ಕುಸುಮ ತನಗೇನೂ ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದಳು. ಪೊಲೀಸರು ವಿಚಾರಣೆ ನಡೆಸಿದಾಗ ಕುಸುಮ ಹಾಗೂ ಪ್ರಭು ಕೊಲೆ ಮಾಡಿರುವ ಮಾಹಿತಿ ತಿಳಿದುಬಂದಿದೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಮೃತನ ಪತ್ನಿ ಹಾಗೂ ಪ್ರಿಯಕರ ತಪ್ಪೊಪ್ಪಿಕೊಂಡಿದ್ದಾರೆನ್ನಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.