ಕೋಟ್ಯಂತರ ರೂ. ಮೌಲ್ಯದ ಮನೆ ನಿರ್ಮಾಣ ಆರೋಪ: ತನಿಖೆಗೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು ನೀಡಿದ ಕೋಟ ಶ್ರೀನಿವಾಸ ಪೂಜಾರಿ | ಜನತಾ ನ್ಯೂಸ್
ಉಡುಪಿ : ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ "ಸರಳ, ಸಜ್ಜನ, ಪ್ರಾಮಾಣಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆರು ಕೋಟಿ ರೂ. ವೆಚ್ಚದ ಗುಡಿಸಲು" ಎಂಬ ಬರಹವು ಅವರ ಮನೆಯ ಫೋಟೋದೊಂದಿಗೆ ವೈರಲ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಜು.30ರಂದು ಮನವಿ ಸಲ್ಲಿಸಿದ್ದಾರೆ.
ತಮ್ಮ ಮನೆ ನಿರ್ಮಾಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವ ಆಪಾದನೆ ಬಗ್ಗೆ ಸ್ವತಃ ಕೋಟ ಶ್ರೀನಿವಾಸ ಪೂಜಾರಿಯವರೇ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದ ಸರ್ವೆ ನಂ.202/2ಡಿ 1ಸಿ 4ರ 13 ಸೆಂಟ್ಸ್ ಜಾಗವನ್ನು ಸ್ವಂತ ಆದಾಯದಿಂದ ಖರೀದಿಸಿದ್ದು, ಇಲ್ಲಿ ಗ್ರಾಪಂ ಪರವಾನಿಗೆ ಪಡೆದು ಮನೆ ಕಟ್ಟುತ್ತಿದ್ದೇನೆ. ನನ್ನ ಈಗಿನ ವಾಸ್ತವ್ಯದ ಮನೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿದೆ.
ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದ 5 ಗುಂಟೆ ಜಮೀನು ನನ್ನ ಸ್ವಂತ ಆದಾಯದಿಂದ ಖರೀದಿಯಾಗಿದ್ದು, ಸದರಿ ಜಾಗದಲ್ಲಿ ಗ್ರಾಪಂ ಪರವಾನಿಗೆ ಪಡೆದು ಮನೆ ಕಟ್ಟುತ್ತಿದ್ದೇನೆ. ಇದಕ್ಕೆ ಸುಮಾರು 60 ಲಕ್ಷ ರೂ. ವೆಚ್ಚವಾಗಿದೆ. ಇದಕ್ಕಾಗಿ ಅಪೆಕ್ಸ್ ಬ್ಯಾಂಕ್ನಲ್ಲಿ ಎರಡು ವರ್ಷಗಳ ಹಿಂದೆ 35 ಲಕ್ಷ ರೂ. ಸಾಲ ಪಡೆದಿದ್ದೇನೆ.
ಇದನ್ನು ನನ್ನ ಸಂಬಳ ಮತ್ತು ಗೌರವಧನದ ಮೂಲಕ ಸಾಲ ಚುಕ್ತಾ ಮಾಡಿದ್ದೇನೆ. ಇನ್ನು, ಇದಕ್ಕೆ ಕಡಿಮೆಯಾದ ಮೊತ್ತಕ್ಕೆ ಬ್ರಹ್ಮಾವರದ ಎಸ್ಬಿಐ ಶಾಖೆಯಲ್ಲಿ 40 ಲಕ್ಷ ರೂ. ಸಾಲ ಮಾಡಿದ್ದೇನೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸರಳ ಹಾಗೂ ಸಜ್ಜನರಾದವರು 13 ಸೆಂಟ್ಸ್ ಜಾಗದಲ್ಲಿ ₹6 ಕೋಟಿ ವೆಚ್ಚದಲ್ಲಿ ಗುಡಿಸಲು ನಿರ್ಮಾಣ ಮಾಡುತ್ತಿದ್ದಾರೆ ಎಂದೆಲ್ಲ ಅಪಪ್ರಚಾರ ಮಾಡಲಾಗುತ್ತಿದೆ.
ಸ್ವಂತ ಆದಾಯದಿಂದ 13 ಸೆಂಟ್ಸ್ ಜಾಗ ಖರೀದಿಸಿ ಗ್ರಾಮ ಪಂಚಾಯತ್ನಿಂದ ಪರವಾನಿಗೆ ಪಡೆದು ಮನೆ ಕಟ್ಟಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಗೆ ಮಹತ್ವ ನೀಡುತ್ತ ಬಂದಿದ್ದೇನೆ. ಶಾಸಕನಾದಾಗಿನಿಂದ ಈವರೆಗೂ ಪಡೆದಿರುವ ವೇತನ, ಗೌರವಧನ, ಆರ್ಥಿಕ ನೆರವು ಹಾಗೂ ಮಗನ ಉದ್ದಿಮೆಯಿಂದ ಬಂದ ಆದಾಯವನ್ನು ಪರಿಗಣಿಸಿ, ಆದಾಯಕ್ಕಿಂತ ಮನೆಯ ನಿರ್ಮಾಣದ ವೆಚ್ಚ ಹೆಚ್ಚಾಗಿರುವುದು ಕಂಡು ಬಂದರೆ ನನ್ನ ವಿರುದ್ಧವೂ ಕ್ರಮಕೈಗೊಳ್ಳಬೇಕು.
ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತ ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತ ವಿಶ್ವನಾಥ ಶೆಟ್ಟಿಯವರಿಗೆ ಮನವಿ ಮಾಡಿದ್ದಾರೆ.