ಸಿದ್ದರಾಮಯ್ಯನವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ, ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ: ಸಿ.ಟಿ.ರವಿ ವ್ಯಂಗ್ಯ | ಜನತಾ ನ್ಯೂಸ್
ಚಿಕ್ಕಮಗಳೂರು : ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇರಬೇಕು. ಹಾಗಾಗಿ ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ. ಟಿ. ರವಿ ಹೇಳಿದರು.
ಅಂಬೇಡ್ಕರ್ ಅವರನ್ನು ಯಾರು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದರೋ ಆ ಜನ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಕೆಲವೊಮ್ಮೆ ಉತ್ತರ ನೀಡಬೇಕಾದ ಸಂದರ್ಭ ಅವರಿಗೆ ಅವರದ್ದೇ ಭಾಷೆಯಲ್ಲಿ ಅರ್ಥವಾಗಲೆಂದು ಉತ್ತರ ಕೊಡುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ. ಹಾಗಾಗಿ ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಸಿದ್ದರಾಮಯ್ಯನವರು ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು. ಆದರೆ ಅವರು ಏನು ಹೇಳುತ್ತಾರೊ ಅದು ಉಲ್ಟಾ ಆಗುತ್ತದೆ, ಮೋದಿ ಪ್ರಧಾನಿ ಆಗಲ್ಲ ಎಂದಿದ್ದರೂ ಎರಡು ಬಾರಿ ಆದರು. 2018ರ ಚುನಾವಣೆಯಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತೇನೆ ಅಂತಲೂ ಹೇಳಿದ್ದರು, ಆದರೆ ಅವರು ಅಧಿಕಾರಕ್ಕೆ ಬರಲಿಲ್ಲ. ಅವರು ಏನು ಹೇಳುತ್ತಾರೊ ಅದಕ್ಕೆ ತದ್ವಿರುದ್ಧವಾಗಿ ಆಗಿದೆ. ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರೆ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.
"ಕೆಲವರ ಬಾಯಲ್ಲಿ ಮಚ್ಚೆ ಇರುತ್ತದೆ, ಅವರು ಹೇಳಿದ್ದು ನಡೆಯುತ್ತದೆ. ಆದರೆ ಸಿದ್ದರಾಮಯ್ಯ ಅವರ ನಾಲಗೆಯಲ್ಲಿ ಉಲ್ಟಾ ಮಚ್ಚೆ ಇರಬೇಕು. ಹಾಗಾಗಿ ಅವರು ಹೇಳಿದ್ದೆಲ್ಲ ಉಲ್ಟಾ ಆಗುತ್ತದೆ" ಎಂದು ಸಿ. ಟಿ. ರವಿ ವಾಗ್ದಾಳಿ ನಡೆಸಿದರು.