ಪತ್ನಿಯನ್ನು ಕಳುಹಿಸಲು ಒಲ್ಲೆ ಎಂದ ಮಾವ, ಮಾವನ ಕತ್ತನ್ನೇ ಬ್ಲೇಡ್ನಿಂದ ಸೀಳಿದ ಅಳಿಯ! | ಜನತಾ ನ್ಯೂಸ್
ಧಾರವಾಡ : ಸಿಟ್ಟು ಮಾಡಿಕೊಂಡು ತವರಿಗೆ ಹೋದ ಹೆಂಡತಿಯನ್ನು ಮರಳಿ ಕಳುಹಿಸಿಲ್ಲ ಎಂಬ ಕಾರಣಕ್ಕೆ ಮಾವನ ಕತ್ತು ಸೀಳಿಸಿರುವ ಭಯಾನಕ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ.
ಶಿವಪ್ಪ ದಳವಾಯಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಜಗದೀಶ್ ಕಂಬಳಿ ಎಂಬಾತನಿಗೆ ಶಿವಪ್ಪ ದಳವಾಯಿಯ ಮಗಳನ್ನು ಮದುವೆ ಮಾಡಿಕೊಟ್ಟಿದ್ದ. ಆದರೆ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯಿಂದ ತವರು ಮನೆಗೆ ಬಂದಿದ್ದ ಪತ್ನಿಯನ್ನು ಜಗದೀಶ್ ಕರೆದುಕೊಂಡು ಹೋಗಲು ಗ್ರಾಮಕ್ಕೆ ಆಗಮಿಸಿದ್ದ. ಆದರೆ ಮಗಳನ್ನು ಕಳುಹಿಸಲು ಶಿವಪ್ಪ ನಿರಾಕರಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ.
ಜಗಳದ ಮಧ್ಯೆ ಅಲ್ಲಿಯೇ ಇದ್ದ ಬ್ಲೇಡ್ನಿಂದ ಮಾವನ ಕತ್ತನ್ನು ಜಗದೀಶ್ ಸೀಳಿದ್ದಾನೆ. ಇದನ್ನು ತಪ್ಪಿಸಲು ಬಂದ ಮಾವನ ಮಗ ಪ್ರವೀಣ್ ಮೇಲೂ ಬ್ಲೇಡ್ನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.