ಭತ್ತದ ಗದ್ದೆಗಿಳಿದು ಕಳೆ ತೆಗೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ! | ಜನತಾ ನ್ಯೂಸ್
ಉಡುಪಿ : ಉಡುಪಿಯಲ್ಲಿ ನಡೆಯುತ್ತಿರುವ ಹಡೀಲು ಬಿದ್ದ ಕೃಷಿದ ಬೇಸಾಯ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡರು. ಭತ್ತದ ಗದ್ದೆಗೆ ಇಳಿದು ಕಳೆ ತೆಗೆಯುವ ಕೆಲಸಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಹಿಂದೆ, ಕರಾವಳಿಗೆ ಬೇಕಾದ ಅಕ್ಕಿಯನ್ನು ಸ್ಥಳೀಯವಾಗಿ ರೈತರು ಬೆಳೆಯುತ್ತಿದ್ದಾರು. ಪ್ರಸ್ತುತ ಬೇಡಿಕೆಯ ಶೇ 95ರಷ್ಟು ಅಕ್ಕಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಭೂಮಿಯನ್ನು ಹಡಿಲು ಬಿಟ್ಟಿರುವುದು ಹಾಗೂ ಕೃಷಿಯಿಂದ ರೈತರು ವಿಮುಖರಾಗುತ್ತಿರುವುದು ಇದಕ್ಕೆ ಕಾರಣ ಎಂದರು.
ಯೂರಿಯಾ ರಸಗೊಬ್ಬರ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೇವು ಲೇಪಿತ ಯೂರಿಯಾವನ್ನು ಮಾರುಕಟ್ಟೆಗೆ ತಂದಿದೆ. ರಸಗೊಬ್ಬರ ಮೌಲ್ಯವರ್ಧನೆಗೆ ನ್ಯಾನೋ ತಂತ್ರಜ್ಞಾನದಲ್ಲಿ ರಸಗೊಬ್ಬರ ತಯಾರಿಸಲಾಗಿದ್ದು, ಕೇವಲ 200 ಮಿಲೀ ರಸ ಗೊಬ್ಬರ ಒಂದು ಎಕರೆಗೆ ಬಳಸಬಹುದು ಎಂದರು.
ವಿಶ್ವಸಂಸ್ಥೆಯಲ್ಲಿ ಭಾರತವು ರಾಗಿಗಳನ್ನು ಅಂತಾರಾಷ್ಟ್ರೀಯವಾಗಿ ಪರಿಗಣಿಸಲು ನಿರ್ಣಯವನ್ನು ಅಂಗೀಕರಿಸಬೇಕೆಂದು ಪ್ರಸ್ತಾಪಿಸಿದ ನಂತರ, ಎಲ್ಲಾ ಸದಸ್ಯ ರಾಷ್ಟ್ರಗಳು ಈ ಪರವಾಗಿ ಮತ ಚಲಾಯಿಸಿದ್ದು, 2023 ಅನ್ನು "ಅಂತಾರಾಷ್ಟ್ರೀಯ ರಾಗಿ ವರ್ಷ" ಎಂದು ಘೋಷಿಸಲಾಗಿದೆ ಎಂದು ಹೇಳಿದರು.
ಅಲ್ಲದೇ ಕರಾವಳಿ ಕುಚ್ಚುಲಕ್ಕಿಗೆ ಮಾನ್ಯತೆ ನೀಡುವ ಬಗ್ಗೆಯೂ ಕರಂದ್ಲಾಜೆ ಕೇಂದ್ರದ ಗಮನ ಸೆಳೆಯೋದಾಗಿ ಹೇಳಿದ್ದಾರೆ. ಭತ್ತದ ಬೆಳೆಗೆ ಪ್ರೋತ್ಸಾಹ, ಬೆಂಬಲ ಬೆಲೆ ನೀಡುವ ಬಗ್ಗೆಯೂ ಸರ್ಕಾರದ ಜೊತೆ ಪ್ರಸ್ತಾಪ ಮಾಡೋದಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕೇದಾರೋತ್ಥಾನ ಟ್ರಸ್ಟ್ನಿಂದ ಉಡುಪಿ ತಾಲ್ಲೂಕಿನಾದ್ಯಂತ ಹಡಿಲುಭೂಮಿ ಕೃಷಿ ಆಂದೋಲನ ನಡೆಸಲಾಗುತ್ತಿದ್ದು 1,500 ಎಕರೆಗೂ ಹೆಚ್ಚು ಹಡಿಲುಭೂಮಿಯಲ್ಲಿ ಭತ್ತದ ನಾಟಿ ಮಾಡಲಾಗಿದೆ. ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿರುವ ಹಿನ್ನಲೆಯಲ್ಲಿ ಬೆಳಗ್ಗೆ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.