ವಿಧವಾವೇತನ ಮಾಡಿಸಿಕೊಡುವುದಾಗಿ ಆಧಾರ್ ಕಾರ್ಡ್ ಪಡೆದು, 5 ಕೋಟಿ ರೂ. ನಾಮ ಹಾಕಿದ ಮಹಿಳೆ! | ಜನತಾ ನ್ಯೂಸ್
ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಸಹೋದರಿಯರಿಬ್ಬರು ಪತಿಯನ್ನು ಕಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ. ದಾಗಿನಕಟ್ಟೆ ಗ್ರಾಮದ ವಿಧವೆಯರಾದ ಗೀತಮ್ಮ, ಸಾವಿತ್ರಮ್ಮ ಎಂಬುವರ ಮನೆಗೆ ಅಧಿಕಾರಿಗಳು ಸಾಲ ವಸೂಲಿಗೆ ಆಗಮಿಸಿ ಹೈರಾಣಾಗಿದ್ದಾರೆ.
ಗೀತಮ್ಮ ಎಂಬುವರು 2.4 ಕೋಟಿ ರೂ., ಸಾವಿತ್ರಮ್ಮ ಹೆಸರಲ್ಲಿ 2 ಕೋಟಿ ರೂ. ಸಾಲ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಬಡ ಹೆಣ್ಣು ಮಕ್ಕಳಿಬ್ಬರಿಗೆ ಸಿಡಿಲು ಬಡಿದಂತಾಗಿತ್ತು. 2013-14ನೇ ಸಾಲಿನಲ್ಲಿ ಇಬ್ಬರ ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದಿದ್ದಾರೆ ಎಂದು ಬ್ಯಾಂಕ್ ಸಿಬ್ಬಂದಿ ವಾದಿಸಿದರೆ, ಬಡ ಹೆಣ್ಣು ಮಕ್ಕಳು ನಾವು ಸಾಲ ತೆಗೆದುಕೊಂಡೇ ಇಲ್ಲ, ಸಾಲದ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ನೆಲೆಸಿರುವ ಗೀತಮ್ಮ ಹಾಗೂ ಸಾವಿತ್ರಮ್ಮ ಮೂಲತಃ ಇದೇ ತಾಲೂಕಿನ ಸೋಮ್ಲಾಪುರ ಗ್ರಾಮದ ವಾಸಿಗಳು. ಇಬ್ಬರು ಸಹೋದರಿಯರಾಗಿದ್ದು, ದಾಗಿನಕಟ್ಟೆ ರಂಗಸ್ವಾಮಿ-ಜಗದೀಶ ಎಂಬುವವರ ಜೊತೆ ವಿವಾಹವಾಗಿದ್ದರು. ರಂಗಸ್ವಾಮಿ ಗೀತಮ್ಮರನ್ನು, ಸಾವಿತ್ರಮ್ಮರನ್ನು ಜಗದೀಶ್ಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ 16 ವರ್ಷಗಳ ಹಿಂದೆಯೇ ಇಬ್ಬರು ಮೃತಪಟ್ಟಿದ್ದರು. ಆ ಬಳಿಕ 3 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಸಹೋದರಿಯರು ಜೀವನ ನಡೆಸುತ್ತಿದ್ದಾರೆ.
5 ಕೋಟಿ ರೂಪಾಯಿ ಸಾಲ ಪಡೆದ ಮೂಲ ಹುಡಕಲು ಹೊರಟಾಗ ಅಚ್ಚರಿ ವಿಷಯವೊಂದು ಗೊತ್ತಾಗಿದೆ. ಗೀತಮ್ಮ ಮತ್ತು ಸಾವಿತ್ರಮ್ಮ ಸಹೋದರನ ಪತ್ನಿ ಶೋಭಾ ಇದಕ್ಕೆಲ್ಲಾ ಕಾರಣ ಎಂಬುದು ಗೊತ್ತಾಗಿದೆ.
ಶೋಭಾ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದವರು. ಇಬ್ಬರು ಮಹಿಳೆಯರ ಪತಿ ತೀರಿಕೊಂಡಾಗ ವಿಧವಾ ವೇತನ ಮಾಡಿಸಿಕೊಡುತ್ತೇನೆ. ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಕೊಡುವಂತೆ ಕೇಳಿದ್ದರು.
ಇದೇ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಆಧಾರ ಮೇಲೆ ಶೋಭಾ ನಕಲಿ ಚಿನ್ನ ಅಡವಿಟ್ಟು ಶಿವಮೊಗ್ಗ ಡಿಸಿಸಿ ಬ್ಯಾಂಕ್ನಲ್ಲಿ 4.5 ಕೋಟಿ ಸಾಲ ಪಡೆದಿದ್ದಾರೆ.
ಇವರ ಹೆಸರಲ್ಲಿ ಬ್ಯಾಂಕಿನ ಯಾವುದೇ ನೋಟಿಸ್ ಬಂದರು ತಮಗೆ ಕಳುಹಿಸುವಂತೆ ಶೋಭಾ ಹೇಳಿದ್ದಾರೆ. ಅವುಗಳನ್ನ ಮಹಿಳೆಯರು ಓಪನ್ ಮಾಡದೆ ನೊಟೀಸ್ ಅನ್ನು ತಮ್ಮ ಸಂಬಂಧಿ ಶೋಭಾಗೆ ಕಳುಹಿಸಿಕೊಟ್ಟಿದ್ದಾರೆ. ಆಗ ಗೊತ್ತಾಗಿದ್ದೇ ಸಂಬಂಧಿ ಶೋಭಾರಿಂದ ತಾವು ಮೋಸ ಹೋಗಿದ್ದೇವೆ ಎಂದು. ಸಂಬಂಧಿಕರು ಅಂತ ನಂಬಿದರೆ ಈ ರೀತಿ ಮೋಸ ಮಾಡಿದ್ದಾರೆ. ಇವರಿಗೆ ಶಿಕ್ಷೆ ಆಗಲೇಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಘಟನೆ ನಡೆದು 7 ವರ್ಷಗಳೇ ಉರುಳಿದ್ರೂ ಕೂಡ ಈ ಸಾಲದ ಬಗ್ಗೆ ಗೀತಮ್ಮ, ಸಾವಿತ್ರಮ್ಮನಿಗೆ ಮಾಹಿತಿಯೂ ಇರಲಿಲ್ಲ. ಇದೀಗ ಬ್ಯಾಂಕಿನವರು ಮನೆಗೆ ಬಂದಾಗಲೇ ತಮ್ಮ ಹೆಸರಲ್ಲಿ ಶೋಭಾ ಸಾಲ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆಗೆ ಆಗ್ರಹಿಸಿದ್ದಾರೆ. ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.