ಪಿಕ್ನಿಕ್ಗೆಂದು ಬಂದಿದ್ದ ಒಂದೇ ಕುಟುಂಬದ ಮೂವರು ನೀರುಪಾಲು! | ಜನತಾ ನ್ಯೂಸ್
ಬಾಗಲಕೋಟೆ : ಪಿಕ್ನಿಕ್ಗೆಂದು ಬಾದಾಮಿಗೆ ಬಂದಿದ್ದ ಒಂದೇ ಕುಟುಂಬದ ಮೂವರು ಶಿವಯೋಗಮಂದಿರ ಬಳಿಯ ನದಿಯಲ್ಲಿ ನೀರುಪಾಲಾದ ದುರ್ಘಟನೆ ನಡೆದಿದೆ.
ಆ ಪೈಕಿ ಇಬ್ಬರ ಶವ ಪತ್ತೆಯಾಗಿದ್ದು, ಇನ್ನೊಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾದ ಶ್ರೀದೇವಿ ಮಾವಿನಮರದ (32), ವಿಶ್ವನಾಥ ಮಾವಿನಮರದ (40) ಮತ್ತು ನಂದಿನಿ ಮಾವಿನಮರದ (12) ಮೃತಪಟ್ಟವರು.
ಮೃತರು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾಗಿದ್ದು, ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದರು. ಹುಣ್ಣಿಮೆ ಹಾಗೂ ರಕ್ಷಾ ಬಂಧನ ಹಿನ್ನೆಲೆಯಲ್ಲಿ ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದರು. ನಂತರ ಬಾದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ತೆರಳಿದ್ದರು.
ಉಪಹಾರ ಸೇವಿಸಲು ಶಿವಯೋಗಮಂದರ ನದಿ ದಡದಲ್ಲಿ ಕೂತಿದ್ದರು. ಈ ಸಂದರ್ಭದಲ್ಲಿ ಕೈ ತೊಳೆಯಲು ಹೋದ ಶ್ರೀದೇವಿ ಮಾವಿನಮರದ ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ಮೈದುನ ವಿಶ್ವನಾಥ ಹಾಗೂ ವಿಶ್ವನಾಥ ಅವರ ಮಗಳು ನಂದಿನಿ ಸಹ ಜಾರಿ ನದಿಗೆ ಬಿದ್ದಿದ್ದಾರೆ.