ಕೆರೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ದಿಢೀರ್ ರದ್ದು, ಎಚ್ ಡಿ ಕುಮಾರಸ್ವಾಮಿ ಅವರಿಗೆ ಅವಮಾನ! | ಜನತಾ ನ್ಯೂಸ್
ಗದಗ : ರೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ದಿಢೀರ್ ರದ್ದುಗೊಳಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇಂದು ಗದಗ ಜಿಲ್ಲೆಯ ಸುಗ್ನಳ್ಳಿ ಗ್ರಾಮದ ಅಲದಮ್ಮನ ಕೆರೆ ಭೂಮಿ ಪೂಜೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ದಿಢೀರನೇ ಕಾರ್ಯಕ್ರಮ ರದ್ದುಗೊಂಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸ್ವತಃ ಶಾಸಕ ರಾಮಣ್ಣ ಲಮಾಣಿ ಅವರೇ ಫೋನ್ ಮಾಡಿದರು. ನೀವೇ ಬರಬೇಕು, ಜನ ನಿಮ್ಮನ್ನ ಬಯಸ್ತಾರೆ ಅಂತ ಹೇಳಿದರು ಅಂತಾ ತಿಳಿಸಿದರು. ಆದರೆ ನಿನ್ನೆ ರಾತ್ರಿ ಅನಿರೀಕ್ಷಿತವಾಗಿ ಇಂದಿನ ಕಾರ್ಯಕ್ರಮನ್ನು ರದ್ದುಗೊಳಿಸಿದ್ದಾರೆ. ಯಾಕೆ ಹೀಗೆ ನಡೆದಿದೆ ಎಂದು ನನಗೆ ತಿಳಿದಿಲ್ಲ. ಆದರೆ ರಾಜಕೀಯ ಮಾಡದೇ ಜನರ ಪರವಾಗಿ ಕೆಲಸ ನಿರ್ವಹಿಸಿ ಎಂದಷ್ಟೇ ಇಲ್ಲಿಯ ಜನಪ್ರತಿನಿಧಿಗಳಿಗೆ ಸಲಹೆ ನೀಡುತ್ತೇನೆ ಎಂದು ತಿಳಿಸಿದರು.
ಸುಗನಹಳ್ಳಿ, ಬನ್ನಿಕೊಪ್ಪ ಕೆರೆ ಅಭಿವೃದ್ಧಿಗೆ 10 ಕೋಟಿ ರೂ. ಹಣವನ್ನು ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ಬಿಡುಗಡೆ ಮಾಡಿದ್ದರು. ಸ್ವತಃ ಇಲ್ಲಿನ ಬಿಜೆಪಿ ಶಾಸಕರೇ ಅನುದಾನ ಕೇಳಿದ್ದರು. ಬಿಜೆಪಿ ಶಾಸಕರು ಕೇಳಿದ ಕೂಡಲೇ ಈವರೆಗೆ ಒಟ್ಟು 50 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ನನ್ನ ಅವಧಿಯಲ್ಲಿ ಬಿಜೆಪಿ ಶಾಸಕರು ಎಂಬ ಕಾರಣಕ್ಕೆ ನಾನು ಸಣ್ಣತನ ತೋರಿಸಿಲ್ಲ. ಹೀಗಾಗಿ, ನನ್ನ ಸರ್ಕಾರದ ಅವಧಿಯಲ್ಲಿ ಹಣ ಬಿಡುಗಡೆ ಆಗಿದೆ ಎಂದು ಅಭಿವೃದ್ಧಿಗೆ ತಡ ಮಾಡಬೇಡಿ ಎಂದು ಮನವಿ ಮಾಡಿದ ಕುಮಾರಸ್ವಾಮಿ, ನಾನು ಕ್ರೆಡಿಟ್ ತೆಗೆದುಕೊಳ್ತೇನೆ ಎಂದು ಕೆಲಸ ಸ್ಥಗಿತ ಮಾಡಬೇಡಿ ಎಂದು ಮನವಿ ಮಾಡಿದರು.
ಸ್ಥಳೀಯ ಶಾಸಕರಿಲ್ಲದೆ ಅಧಿಕೃತವಾಗಿ ಕಾಮಗಾರಿಗೆ ನಾನು ಚಾಲನೆ ನೀಡೋದಿಲ್ಲ ಎಂದ ಕುಮಾರಸ್ವಾಮಿ, ಸುಗನಹಳ್ಳಿ ಗ್ರಾಮಕ್ಕೆ ತೆರಳಿ ಜನರನ್ನ ಭೇಟಿಯಾಗುವುದಾಗಿ ತಿಳಿಸಿದರು.