ಜಮೀನು ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರ ಹತ್ಯೆ, 9 ಮಂದಿ ಅರೆಸ್ಟ್! | ಜನತಾ ನ್ಯೂಸ್
ಬಾಗಲಕೋಟೆ : ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ.
ಮದರಖಂಡಿಯ ಸುಮಾರು 3 ಎಕರೆ 21 ಗುಂಟೆ ಜಮೀನಿನ ವಿವಾದ ನಾಲ್ವರು ಸಹೋದರರ ಬರ್ಬರ ಹತ್ಯೆಗೆ ಕಾರಣವಾಗಿತ್ತು. ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದ ಹೊರವಲಯದ ತೋಟದಲ್ಲಿ ಶನಿವಾರ ರಾತ್ರಿ ಈ ಕೊಲೆ ನಡೆದಿತ್ತು.
ಮದರಖಂಡಿ ಮತ್ತು ಪುಟಾಣಿ ಎರಡು ಕುಟುಂಬಗಳ ನಡುವಿನ ಜಮೀನು ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಮುದರಡ್ಡಿ(ಉದಗಟ್ಟಿ) ಕುಟುಂಬದ ಸಹೋದರರಾದ ಹನುಮಂತ ಮಹಾದೇವ ಮುದರಡ್ಡಿ(45 ವ), ಮಲ್ಲಪ್ಪ(42 ವ) ಬಸಪ್ಪ(37 ವ) ಹಾಗೂ ಈಶ್ವರ (35 ವ)ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಜಮಖಂಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುದರಡ್ಡಿ ಕುಟುಂಬದವರು ಗ್ರಾಮದ ಪುಟಾಣಿ ಕುಟುಂಬದವರಿಂದ ಜಮೀನು ಖರೀದಿ ಮಾಡಿದ್ದು, ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಿವಾದ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ. ಇದೇ ವಿವಾದ ಸ್ಫೋಟಗೊಂಡು ನಾಲ್ವರ ಕೊಲೆ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಪುಟಾಣಿ ಕುಟುಂಬದವರಿಂದ ಖರೀದಿಸಿದ್ದ 3ಎಕರೆ 21 ಗುಂಟೆ ಜಮೀನಿನಲ್ಲಿ 21 ಗುಂಟೆ ಜಾಗವನ್ನು ಬಿಟ್ಟು ಕೊಡುವುದಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುದರಡ್ಡಿ ಕುಟುಂಬದವರು ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ ಆ ಜಮೀನು ಬಿಟ್ಟು ಕೊಡದೆ ಸತಾಯಿಸಿದ್ದರಿಂದ ಪುಟಾಣಿ ಕುಟುಂಬದವರು ದುಷ್ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಪುಟಾಣಿ ಮನೆತನದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ ಒಟ್ಟು 12 ಮಂದಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಮೃತರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.