ಗಡಿಭಾಗಗಳಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ: ಡಾ.ಕೆ.ಸುಧಾಕರ್ | ಜನತಾ ನ್ಯೂಸ್
ಚಿಕ್ಕಬಳ್ಳಾಪುರ : ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ ಜಿಲ್ಲೆಗಳಲ್ಲಿ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಪ್ರತಿ ದಿನ ಗಡಿ ಜಿಲ್ಲೆಗಳಿಗೆ ಬರುವ ಜನರಿಗೆ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಲಾಗುವುದು" ಎಂದರು.
"ಕೇರಳದಿಂದ ಪ್ರತಿ ದಿನ ಅನೇಕರು ಗಡಿ ಜಿಲ್ಲೆಗಳಿಗೆ ಬರುತ್ತಾರೆ. ಶಿಕ್ಷಣ, ಆರೋಗ್ಯ ಸೇವೆ, ನಿತ್ಯದ ವಹಿವಾಟುಗಳಿಗೆ ದಕ್ಷಿಣ ಕನ್ನಡ, ಉಡುಪಿ ಮೊದಲಾದ ಜಿಲ್ಲೆಗಳಿಗೆ ಜನರು ಬರುತ್ತಾರೆ. ಇನ್ನು ವಿಮಾನ, ರೈಲುಗಳ ಮೂಲಕ ಬರುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕಿದೆ. ಇದಕ್ಕಾಗಿ ಕೋವಿಡ್ ಮಾರ್ಗಸೂಚಿ ರೂಪಿಸಲಾಗುವುದು" ಎಂದು ಸಚಿವರು ತಿಳಿಸಿದ್ದಾರೆ.
ಜಿಎಫ್ ನ ಶಿಕ್ಷಣ ಸಂಸ್ಥೆಯಲ್ಲಿ 32 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಕೇರಳದಿಂದ ಬಂದವರಾಗಿದ್ದಾರೆ. ನಾಳೆ ಸಂಸ್ಥೆಗೆ ಹೋಗಿ ಸಂಸ್ಥೆಯ ಮೇಲೂ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಕೇರಳದಿಂದ ಬಂದಾಗಲೇ ಅವರ ನೆಗೆಟಿವ್ ವರದಿ ಪಡೆಯಬೇಕಿತ್ತು. ಇದು ಸಂಸ್ಥೆಯ ಜವಾಬ್ದಾರಿಯೂ ಆಗಿದೆ. ರಾಜ್ಯದಲ್ಲಿ 50 ಸಾವಿರ ಪ್ರಕರಗಳನ್ನು 700-800 ಕ್ಕೆ ತರಲಾಗಿದೆ. ಸರ್ಕಾರ ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದೆ ಎಂದರು.