ಆಸ್ಕರ್ ಫೆರ್ನಾಂಡಿಸ್ ಒಬ್ಬ ಅಜಾತಶತ್ರು ರಾಜಕಾರಣಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ | ಜನತಾ ನ್ಯೂಸ್
ಉಡುಪಿ : ಆಸ್ಕರ್ ಒಬ್ಬ ಅಜಾತಶತ್ರು ರಾಜಕಾರಣಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆನೆದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಪಕ್ಷದಲ್ಲಿನ ಪ್ರಾಮಾಣಿಕತೆ, ನಾಯಕತ್ವದಲ್ಲಿದ್ದಂತಹ ನಿಷ್ಠೆಯಿಂದಾಗಿಯೇ ಆಸ್ಕರ್ ಕೇಂದ್ರಮಟ್ಟದಲ್ಲಿ ನಾಯಕನಾಗಿ ಗುರುತಿಸಿಕೊಂಡವರು. ಯುವಕರಿಗೆ, ಕಿರಿಯರಿಗೆ ಗೌರವ ಕೊಡುವಂತಹ ಏಕೈಕ ರಾಜಕಾರಣಿಯಾಗಿ ಬೆಳೆದು ಬಂದವರು. ಪಕ್ಷ ಸದೃಢ ಆಗಿದ್ದಾಗ ಎಲ್ಲರೂ ಮುಂದೆ ಬಂದು ನಾಯಕತ್ವ ವಹಿಸುತ್ತಾರೆ. ಸಂಕಷ್ಟ ಕಾಲದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು.
ರಾಜಕೀಯ ಜೀವನದಲ್ಲಿ ನನಗೂ ಆಸ್ಕರ್ ಫೆರ್ನಾಂಡಿಸ್ ಅವರಿಗೂ ಸುಮಾರು 42 ವರ್ಷಗಳ ನಂಟಿದೆ. ಅವರು ವಿದ್ಯಾರ್ಥಿ ಘಟಕದ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿದ್ದ ಕಾಲದಿಂದಲೂ ನಾನು ಅವರ ಜತೆಗೆ ಒಡನಾಟ ಹೊಂದಿದ್ದೆ. ಅವರ ಭೇಟಿಗಾಗಿ ಆಗಾಗ ಉಡುಪಿಗೆ ಬರುತ್ತಿದ್ದೆ.
ಉಡುಪಿ ಪುರಸಭೆಯ ಕೌನ್ಸಿಲರ್ ಆಗಿ, ಉಡುಪಿ ಡ್ರೈವರ್ ಅಸೋಸಿಯೇಶನ್ ಅಧ್ಯಕ್ಷರಾಗಿ, ಹಂತ-ಹಂತವಾಗಿ ನಾಯಕನಾಗಿ ಬೆಳೆದು ಬಂದು ರಾಷ್ಟ್ರ ರಾಜಕಾರಣದಲ್ಲೂ ಸೈ ಎನಿಸಿಕೊಂಡವರು. ಬೆಂಗಳೂರು-ಮೈಸೂರು ದಶ ಪಥ ರಸ್ತೆಗೆ ಅಂಕಿತ ಹಾಕಿದ್ದೆ ಅವರು ಕಾರ್ಮಿಕ ಸಚಿವರಾಗಿದ್ದ ಕಾಲದಲ್ಲಿ ತಂದಂತಹ ಕ್ರಾಂತಿಕಾರಿ ಬದಲಾವಣೆಗಳು ಕಳೆದ ಅರವತ್ತು ವರ್ಷಗಳಲ್ಲಿ ಯಾರೂ ಕೂಡ ಯೋಚನೆ ಮಾಡಿರಲಿಕ್ಕಿಲ್ಲ. ಕಾರ್ಮಿಕರ ಮಕ್ಕಳಿಗೆ ಎಂಬಿಬಿಎಸ್ ಸೀಟು, ಎಲ್ಲ ಇಎಸ್ಐ ಆಸ್ಪತ್ರೆಗಳನ್ನು ಮೆಡಿಕಲ್ ಕಾಲೇಜಾಗಿ ಪರಿವರ್ತನೆ ಮಾಡಿ ಕಾರ್ಮಿಕರ ಮಕ್ಕಳನ್ನು ಮೆಡಿಕಲ್ ಕಾಲೇಜಿಗೆ ಉಚಿತ ಸೇರ್ಪಡೆ ಮಾಡುವ ಅವಕಾಶ ಕಲ್ಪಿಸಿದ್ದರು.
ಫೆರ್ನಾಂಡಿಸ್ ರ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ. ಆಸ್ಕರ್ ನಿಧನದಿಂದ ರಾಷ್ಟ್ರ ಕಾಂಗ್ರೆಸ್ಗೆ ನಷ್ಟ ಆಗಿದೆ. ಅಗಲಿನ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇನೆ. ಆಸ್ಕರ್ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಡಿಕೆಶಿ ಪ್ರಾರ್ಥನೆ ಮಾಡಿದರು.