ಅನುಮತಿ ಪಡೆಯದೇ ಎಸ್ಪಿ ನಿವಾಸದಲ್ಲಿದ್ದ ಮರ ಕಡಿದ ಪ್ರಕರಣ: ಸಚಿವರಿಗೆ ದೂರು | ಜನತಾ ನ್ಯೂಸ್
ಮಂಡ್ಯ : ಅರಣ್ಯ ಇಲಾಖೆ ಅನುಮತಿ ಪಡೆಯದೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಸುಭಾಷ್ ನಗರದಲ್ಲಿರುವ ತಮ್ಮ ಅಧಿಕೃತ ನಿವಾಸದ ಆವರಣದಲ್ಲಿದ್ದ ಮರಗಳನ್ನು ಕತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೇಳಿಕೆ ನೀಡಿರುವ ಮಂಡ್ಯ ಡಿಸಿಎಫ್ ರವಿಶಂಕರ್, ಎಸ್ಪಿ ಮನೆ ಒಳಗಿದ್ದ 9 ಅಶೋಕ ಮರಗಳನ್ನು ಕಡಿಯಲಾಗಿದೆ. ಅಶೋಕ ಮರ ಕಡಿಯಲು ಅನುಮತಿ ಬೇಕಿಲ್ಲ. ಆದರೆ, ಸರ್ಕಾರಿ ಜಾಗದಲ್ಲಿ ಮರ ಕಡಿಯುವ ಮೊದಲು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಆದರೆ, ಮಾಹಿತಿ ನೀಡಿರಲಿಲ್ಲ. ಈ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳಲು ಕೆಲವೊಂದು ಗೊಂದಲಗಳಿವೆ. ತಜ್ಞರು ಹಾಗೂ ಮೇಲಾಧಿಕಾರಿಗಳ ಸಲಹೆ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಮ್ಮಿಂದ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಸರ್ಕಾರಿ ನಿವಾಸ ಆಗಿರುವುದರಿಂದ ಅನುಮತಿ ಪಡೆಯಬೇಕಾಗಿದೆ. ಇದರ ಬಗ್ಗೆ ನೋಟಿಸ್ ನೀಡಲಾಗುವುದು ಎಂದರು.
ಸರ್ಕಾರಿ ನಿವಾಸದಲ್ಲಿದ್ದ ಮರಗಳ ಕಡಿದಿರುವ ಎಸ್ಪಿ ಅಶ್ವಿನಿ ವಿರುದ್ಧ ವರ್ಲ್ಡ್ ವಿಶ್ವಮಾನವ ಹಕ್ಕುಗಳು ಸೇವಾ ಕೇಂದ್ರದಿಂದ ಗೃಹ ಸಚಿವರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ.