ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರೈಸ್ತ ಮಷನರಿಗಳಿಂದ ಮತಾಂತರ, ನನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ! | ಜನತಾ ನ್ಯೂಸ್
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರೈಸ್ತ ಮಷನರಿಗಳು ಮತಾಂತರ ಮಾಡುತ್ತಿವೆ ಎಂಬ ಆರೋಪದ ಕುರಿತು ಬಂದ ಚರ್ಚೆಗೆ ಸಂಬಂಧಿಸಿದಂತೆ ಶೂನ್ಯವೇಳೆಯಲ್ಲಿ ಗೂಳಿಹಟ್ಟಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಹೊಸದುರ್ಗ ಕ್ಷೇತ್ರದಲ್ಲಿ 18-20 ಸಾವಿರ ಜನರನ್ನು ಮತಾಂತರ ಮಾಡಲಾಗಿದೆ. ನನ್ನ ಅಮ್ಮನನ್ನು ಬಿಟ್ಟಿಲ್ಲ. ಕ್ರೈಸ್ತ ಮಿಷನರಿಗಳು ಅವರನ್ನೂ ಬ್ರೇನ್ ವಾಷ್ ಮಾಡಿ ಕಳುಹಿಸಿವೆ. ನಾನು ಈ ವಿಷಯವನ್ನು ಮನೆಯಲ್ಲಿ ಮಾತನಾಡುವಂತೆಯೂ ಇಲ್ಲ. ಮಾತನಾಡಿದರೆ ಸತ್ತು ಹೋಗುತ್ತೇನೆ ಎನ್ನುತ್ತಾರೆ. ಮತಾಂತರ ವಿರೋಧ ಮಾಡಿದರೆ ಚರ್ಚ್ನವರು ರೇಪ್ ಕೇಸ್ ಹಾಕಿಸ್ತಾರೆ ಎಂದು ಅವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ರಿಶ್ಚಿಯನ್ ಮಿಷನರಿಗಳಿಂದ ಬಂದವರು ಚರ್ಚ್ಗಳಿಗೆ ಕರೆದೊಯ್ಯುತ್ತಾರೆ. ನಂತರ ಬ್ರೈನ್ ವಾಷ್ ಮಾಡಿ ಕಳಿಸುತ್ತಾರೆ. ಮನೆಗೆ ಹೋದ ಮೇಲೆ ಹಣೆಗೆ ಕುಂಕುಮ ಇಡಬಾರದು ಎಂದೆಲ್ಲ ಹೇಳಿ ಕಳುಹಿಸುತ್ತಾರೆ. ಇದೀಗ ನನ್ನ ಅಮ್ಮನ ಮೊಬೈಲ್ ರಿಂಗ್ ಟೋನ್ ಕೂಡ ಬದಲಾಗಿದೆ, ಕ್ರಿಶ್ಚಿಯನ್ ಹಾಡುಗಳನ್ನ ಹಾಕಿಕೊಂಡಿದ್ದಾರೆ. ಕ್ರಿಶ್ಚಿಯನ್ ದೇವರ ಫೋಟೋ ಇಟ್ಟುಕೊಂಡಿದ್ದಾರೆ.
ನಮಗೆ ಇದರಿಂದ ಮುಜುಗರ ಆಗಿದೆ. ಇದು ಕೇವಲ ನಮ್ಮ ಮನೆಯ ಸಮಸ್ಯೆ ಮಾತ್ರವಲ್ಲ ರಾಜ್ಯಾದ್ಯಂತ ಈ ರೀತಿ ಆಗ್ತಿದೆ. ಎಸ್ಸಿ, ಎಸ್ಟಿ ಜನಾಂಗದವರು ನಮ್ಮ ಕ್ಷೇತ್ರದಲ್ಲಿ ಬಹಳ ಸಂಖ್ಯೆಯಲ್ಲಿ ಮತಾಂತರ ಆಗುತ್ತಿದ್ದಾರೆ. ಇವರು ಕೇವಲ ಹಿಂದೂ ಮಾತ್ರವಲ್ಲ, ಮುಸ್ಲಿಮರನ್ನೂ ಮತಾಂತರ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಏನಾದರೂ ಹೇಳಿದ್ರೆ ಅಟ್ರಾಸಿಟಿ ಕೇಸ್ , ರೇಪ್ ಕೇಸ್ ಹಾಕಿಸ್ತಾರೆ. ಕ್ರಿಶ್ಚಿಯನ್ಗೆ ಹೋದ್ಮೇಲೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಿಗುವ ಬೆನಿಫಿಟ್ ಬಿಟ್ಟು ಹೋಗಲಿ ಎಂದು ಗುಡುಗಿದರು.
ಆಗ ಮಾತನಾಡಿದ ಶಾಸಕ ಕೆಜಿ ಬೋಪಯ್ಯ, ಮತಾಂತರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ಬರಬೇಕಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದರು. ಇದೇ ಮಾತನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪುಷ್ಟೀಕರಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇದು ಸರ್ಕಾರದ ಗಮನದಲ್ಲೂ ಇದೆ. ಆಮಿಷ ಒಡ್ಡಿ ಮತಾಂತರ ಮಾಡುವುದು ಅಪರಾಧವಾಗಿದೆ. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ. ಈ ಸಂಬಂಧ ಕಾನೂನು ತರುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.