ಬೀದಿ ನಾಯಿ ವಿಚಾರಕ್ಕೆ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ! | ಜನತಾ ನ್ಯೂಸ್
ಕಲಬುರಗಿ : ವ್ಯಕ್ತಿ ಓರ್ವನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯ ಹೈಕೋರ್ಟ್ ಮುಂಭಾಗದಲ್ಲಿ ನಡೆದಿದೆ.
ಗುರುರಾಜ್ ಕುಲ್ಕರ್ಣಿ (35) ಕೊಲೆಯಾದ ವ್ಯಕ್ತಿ. ಪವನ್ ಜಹಾಗೀರದಾರ್ ಕೊಲೆ ಮಾಡಿದ ಆರೋಪಿ.
ಕಲಬುರಗಿ ನಗರದ ಹೈಕೋರ್ಟ್ ಮುಂಭಾಗದ ಅಕ್ಕಮಹಾದೇವಿ ಕಾಲೋನಿ ನಿವಾಸಿಯಾಗಿರುವ ಗುರುರಾಜ್ ಮನೆಯಲ್ಲಿ ನಾಯಿಯೊಂದನ್ನು ಸಾಕಿದ್ದರು.. ಗುರುರಾಜ್ ಕುಲ್ಕರ್ಣಿ ಸಹೋದರಿ ಮನೆ ಹತ್ತಿರ ಬೀದಿ ನಾಯಿಯೊಂದು ಮಾಂಸದ ತುಂಡು ಹಿಡಿದುಕೊಂಡು ಬಂದಿತ್ತಂತೆ. ಈ ವೇಳೆ ಮಗಳು ಮನೆ ಹತ್ರ ಬಂದಿದ್ದ ನಾಯಿಗೆ ಬಿಸ್ಕೆಟ್ ಚಪಾತಿ ಹಾಕುತ್ತಿದ್ದಳು.
ಆ ವೇಳೆ ಪಕ್ಕದ ಮನೆಯ ಪವನ್ ಜಾಗಿರ್ದಾರ್ ಎಂಬಾತ ನಾಯಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಆದರೆ ಕಲ್ಲು ಮಿಸ್ ಆಗಿ ಗುರುರಾಜ್ ಕುಲ್ಕರ್ಣಿ ಸಹೋದರಿಗೆ ಬಡಿದಿದೆ. ಇದೇ ವಿಚಾರಕ್ಕೆ ಗುರುರಾಜ್ ಕುಲ್ಕರ್ಣಿ ಸಹೋದರಿ ಮತ್ತು ಪವನ್ ಜಾಗಿರ್ದಾರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಜಗಳ ತರಾಕಕ್ಕೇರಿ ಗುರುರಾಜ್ ಕುಲ್ಕರ್ಣಿ ಸಹೋದರನ ಮೇಲೆ ದಾಳಿ ಮಾಡಿ ಕಾಲು ಮುರಿದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಜಾಗಿರ್ದಾರ್ ವಿರುದ್ಧ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಕರಣ ದಾಖಲಾಗುತ್ತಿದಂತೆ ಪವನ್ ಜಾಗಿರ್ದಾರ್ ಜಾಮೀನು ಪಡೆದು ಹೊರ ಬಂದಿದ್ದ.
ಈ ವಿಚಾರವಾಗಿ ಸಂಧಾನ ಮಾಡಿಕೊಳ್ಳೋಣ ಬಾ ಎಂದು ಪವನ್ ಹಾಗೂ ಆತನ ಗೆಳೆಯರು ಗುರುರಾಜ ಅವರನ್ನು ಕರೆದಿದ್ದರು. ಗುರುವಾರ ರಾತ್ರಿ ಮಾತುಕತೆ ನಡೆದ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹೊಡೆದಾಡುವ ವೇಳೆ ಗುರುರಾಜ ಮೇಲೆ ಪವನ್ ಕಲ್ಲಿನಿಂದ ಹಲ್ಲೆ ಮಾಡಿದ. ಗುರುರಾಜ್ ಕುಲ್ಕರ್ಣಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಗೈದು ಎಸ್ಕೇಪ್ ಆಗಿದ್ದಾರೆ ಎಂದು ಗುರುರಾಜ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ