ಜೂಜು ಅಡ್ಡೆ ಮೇಲೆ ದಾಳಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದ ವ್ಯಕ್ತಿ ಸಾವು | ಜನತಾ ನ್ಯೂಸ್
ಮೈಸೂರು : ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ ಹಿನ್ನೆಲೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.
ನಂಜುಂಡ(37) ಮೃತ ದುರ್ದೈವಿ. ಹದಿನಾರು ಗ್ರಾಮದಲ್ಲಿ ಭಾನುವಾರ ಸಂಜೆ 6 ಗಂಟೆಯಲ್ಲಿ ಐದಾರು ಜನರಿದ್ದ ಗುಂಪು ಇಸ್ಪೀಟ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬಂದ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದು, ಈ ವೇಳೆ ಜೂಜುಕೋರರು ದಿಕ್ಕಾಪಾಲಾಗಿ ಓಡಿದರು.
ಈ ಪೈಕಿ ನಂಜುಂಡ ಎಂಬಾತ ಪೊಲೀಸರಿಂದ ತಪ್ಪಿಸಿಕೊಳ್ಳಲು ಹದಿನಾರು ಕೆರೆಗೆ ಜಿಗಿದಿದ್ದ. ಕೆರೆಗೆ ಹಾರಿದ್ದ ನಂಜುಂಡನಿಗೆ ಈಜು ಬರುತ್ತಿರಲಿಲ್ಲ. ಹೀಗಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ನಂಜುಂಡ ಮೃತದೇಹ ಪತ್ತೆ ಮಾಡಿದ್ದಾರೆ.
ಈ ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.