ಸಾಂಬಾರ್ ಸರಿಯಿಲ್ಲವೆಂದು ಬಂದೂಕಿನಿಂದ ಗುಂಡಿಟ್ಟು ತಾಯಿ, ತಂಗಿಯ ಕೊಂದ ಯುವಕ | ಜನತಾ ನ್ಯೂಸ್
ಸಿದ್ದಾಪುರ : ತಾಲ್ಲೂಕಿನ ಕುಡೇಗೋಡಿನಲ್ಲಿ ಸಾಂಬಾರ್ ಸರಿಯಿಲ್ಲವೆಂದು ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನು ಬುಧವಾರ ಅಕ್ರಮ ನಾಡ ಬಂದೂಕಿನಿಂದ ಗುಂಡಿಟ್ಟು ಕೊಲೆ ಮಾಡಿದ್ದಾನೆ.
ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ರಮ್ಯಾ ನಾರಾಯಣ ಹಸ್ಲರ್ (20) ಕೊಲೆಯಾದವರು. ಆರೋಪಿ ಮಂಜುನಾಥ ನಾರಾಯಣ ಹಸ್ಲರ್ನನ್ನು (24) ಬಂಧಿಸಲಾಗಿದೆ.
ಮನೆಯಲ್ಲಿ ಮಾಡಿದ್ದ ಸಾಂಬಾರು ಚೆನ್ನಾಗಿಲ್ಲ ಎಂದು ಆರೋಪಿ ಕ್ಯಾತೆ ತೆಗೆದಿದ್ದನಂತೆ. ಅಷ್ಟಕ್ಕೂ ಸುಮ್ಮನಾಗದ ಆರೋಪಿ ಮಂಜುನಾಥ, ಮನೆಯಲ್ಲಿದ್ದ ನಾಡ ಬಂದೂಕು ತೆಗೆದುಕೊಂಡು ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆ.
ಆರೋಪಿಯು ಮದ್ಯ ಸೇವನೆ ಮತ್ತು ನಾಡ ಬಂದೂಕಿನಿಂದ ಶಿಕಾರಿ ಮಾಡುವ ಚಟ ಹೊಂದಿದ್ದ. ತನ್ನ ತಾಯಿಯು ಸಹಕಾರ ಸಂಘದಲ್ಲಿ ಸಾಲ ಮಾಡಿ ತಂಗಿಗೆ ಮೊಬೈಲ್ ಫೋನ್ ಕೊಡಿಸುವ ವಿಷಯದ ಬಗ್ಗೆ ತಾಯಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಕುಡಿದ ಅಮಲಿನಲ್ಲೇ ಜಗಳವಾಡಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾನೆ. ಕುಡುಕ ಆರೋಪಿ ಮಗನ ವಿರುದ್ಧ ತಂದೆ ನಾರಾಯಣ ಹಸ್ಲರ್ ಪೊಲೀಸರಿಗೆ ದೂರು ನೀಡಿದ್ದು, ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.