ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂಸ್
ಹಾವೇರಿ : ರೈತರ ಮೇಲೆ ಬಿ. ಎಸ್ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು. ಮೊನ್ನೆ ಯುಪಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹರಿಸಿ ಕೊಂದರು. ಇದು ಕೊಲೆಗಡುಕ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ಅವರು ಶನಿವಾರ ಪ್ರಚಾರ ಭಾಷಣ ಮಾಡಿದರು.
ಉದಾಸಿ ಮತ್ತು ಶಿವರಾಜ್ ಸಜ್ಜನರ್ ಇಬ್ಬರೂ ಸೇರಿ ಹಾವೇರಿಯ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನುಂಗಿ ನೀರುಕುಡಿದರು. ಖಾಲಿ ಸಕ್ಕರೆ ಚೀಲಗಳನ್ನೂ ಬಿಡದೆ ಮಾರಾಟ ಮಾಡಿದ್ದಾರೆ. ಈಗ ಕಾರ್ಖಾನೆ ಖಾಸಗಿಯವರ ಪಾಲಾಗಿದೆ. ಇಂಥವರು ಈಗ ಬಿಜೆಪಿ ಅಭ್ಯರ್ಥಿಯಾಗಿ ನಿಮ್ಮ ಬಳಿ ಮತ ಕೇಳುತ್ತಾರೆ, ಮತ ನೀಡುತ್ತೀರೋ, ಬಿಡುತ್ತೀರೋ ಕ್ಷೇತ್ರದ ಜನರೇ ಯೋಚನೆ ಮಾಡಬೇಕು.
ಕೈ ಬಾಯಿ ಶುದ್ಧವಾಗಿರುವ ಶ್ರೀನಿವಾಸ್ ಮಾನೆಯಂತಹ ಶಾಸಕರು ಕ್ಷೇತ್ರಕ್ಕೆ ಬೇಕೋ? ಭ್ರಷ್ಟ ಶಿವರಾಜ್ ಸಜ್ಜನರ್ ಬೇಕೋ? ಎಂದು ಯೋಚಿಸಿ ಎಂದು ಮತದಾರರಿಗೆ ಮನವಿ ಮಾಡಿದರು
ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ ಕಾಂಗ್ರೆಸ್- ಜೆಡಿಎಸ್ ನ ಹದಿನೇಳು ಶಾಸಕರನ್ನು ಖರೀದಿ ಮಾಡಿ, ಸರ್ಕಾರ ಮಾಡಿದರು. ಆದರೂ ಆವರು ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಲಿಲ್ಲ. ಈಗ ಬಸವರಾಜ ಬೊಮ್ಮಾಯಿಯವರು ಕೈಕಾಲು ಹಿಡಿದು ಚುನಾವಣಾ ಪ್ರಚಾರಕ್ಕೆ ಬರುವಂತೆ ಗೋಗರೆದಿದ್ದಾರೆ. ಹಾಗಾಗಿ ಈ ಕಡೆ ಬರಬಹುದು ಎಂದರು.
ಏನೂ ಕೆಲಸ ಮಾಡದಿದ್ದರೆ ಅವರೆ ಬಿಟ್ಟು ಹೋಗಬೇಕು. ಬಿಜೆಪಿಯವರು ಬಿಟ್ಟು ಹೋಗುವುದಿಲ್ಲ. ಭಂಡರಿವರು. ಹತ್ತು ಕೆಜಿ ಅಕ್ಕಿ ಬೇಕು ಎನ್ನುವುದಾದರೆ ನಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು ಗೆಲ್ಲಿಸಿ. ನುಂಗುವವರ ಬಗ್ಗೆ ಬಹಳ ಎಚ್ಚರದಿಂದಿರಿ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ಶಿವರಾಜ ಸಜ್ಜನರ ಅಂಥವರನ್ನು ನಂಬಬೇಡಿ. ಅಕ್ಟೋಬರ್ 30ರಂದು ಮಾನೆಯವರ ಹಸ್ತದ ಗುರುತಿಗೆ ವೋಟು ಹಾಕಿ ಕಳಿಸಿಕೊಡಿ. 2023ಕ್ಕೆ ನಾವೆ ಮತ್ತೆ ಅಧಿಕಾರಕ್ಕೆ ಬರುತ್ತೀವಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇದು ಸಾರ್ವತ್ರಿಕ ಚುನಾವಣೆಯಲ್ಲ, ಈ ಚುನಾವಣೆಯಲ್ಲಿ ಶ್ರೀನಿವಾಸ ಮಾನೆಯವರಿಗೆ ಆಶೀರ್ವಾದ ಮಾಡಬೇಕು. ಸಾರ್ವತ್ರಿಕ ಚುನಾವಣೆ 2023ರಲ್ಲಿ ನಡೆಯುತ್ತದೆ. ಶಾಸಕರಾಗಿದ್ದ ಉದಾಸಿಯವರು ಅಗಲಿದ ಮೇಲೆ ಅವರ ಜಾಗ ಭರ್ತಿ ಮಾಡಲು ಉಪಚುನಾವಣೆ ಬಂದಿದೆ. ಈ ಚುನಾವಣೆ ಬರಲಿ ಎಂದು ಯಾರು ಕೂಡ ಬಯಸಿರಲಿಲ್ಲ. ಉದಾಸಿಯವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕೇವಲ ಆರು ಸಾವಿರ ಮತಗಳಿಂದ ಸೋತರು. ಸೋತ ನಂತರವೂ ಶ್ರೀನಿವಾಸ ಮಾನೆ ನಿರಂತರವಾಗಿ ನಿಮ್ಮ ಜೊತೆಗಿದ್ದು, ತಮ್ಮ ಕೈಲಾದ ಸಹಾಯ ಮಾಡಿದ್ದಾರೆ ಎಂದರು.