ಪತ್ನಿಯ ಕತ್ತು ಕುಯ್ದು ಪತಿ ಆತ್ಮಹತ್ಯೆ! | ಜನತಾ ನ್ಯೂಸ್
ರಾಮನಗರ : ಪಟ್ಟಣ ವಾಸದ ಆಸೆಗೆ ಬಿದ್ದ ಪತ್ನಿಯನ್ನು ಕೊಂದು ಪತಿ ತಾನು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗುಡ್ಡ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಇಂದ್ರಮ್ಮ(35) ಕೊಲೆಯಾದ ಮಹಿಳೆ, ದೇಸಿಗೌಡ(40) ನೇಣಿಗೆ ಶರಣಾದ ವ್ಯಕ್ತಿ.
ಇಂದಿರಮ್ಮ, ದೇಸೀಗೌಡ ಮಗನೊಂದಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ನಿಂದಾಗಿ ದಂಪತಿಗಳು ಬೆಂಗಳೂರಿನಿಂದ ಸ್ವಗ್ರಾಮ ಗುಡ್ಡೆವೀರನಹೊಸಹಳ್ಳಿ ಗ್ರಾಮಕ್ಕೆ ವಾಪಸ್ ಬಂದಿದ್ದರು.
ಇತ್ತೀಚೆಗೆ ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದಿದ್ದು, ನಗರ ವಾಸಕ್ಕೆ ಗೀಳು ಬಿದಿದ್ದ ಪತ್ನಿ ಇಂದಿರಾ ಪದೇ ಪದೇ ಗಂಡನನ್ನು ಮತ್ತೆ ಬೆಂಗಳೂರಿಗೆ ವಾಪಸ್ ಹೋಗುವಂತೆ ಪೀಡಿಸುತ್ತಿದ್ದಳು. ಗ್ರಾಮದಲ್ಲಿ ಚಿಲ್ಲರೆ ಹಾಗೂ ಕೋಳಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.
ಕಳೆದ ಕೆಲ ದಿನಗಳ ಹಿಂದೆ ಮತ್ತೆ ಬೆಂಗಳೂರಿಗೆ ಹೋಗೋಣ ಎಂದು ಕ್ಯಾತೆ ತೆಗೆದಿದ್ದ ಪತ್ನಿಯೊಂದಿಗೆ ದೇಸೀಗೌಡ ಜಗಳ ಮಾಡಿಕೊಂಡಿದ್ದ. ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ಮಾಡಿಸಿದ್ದರು.
ಆದರೆ ಪ್ರತಿನಿತ್ಯ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ದೇಸಿಗೌಡ, ಹೆಂಡತಿ ಇಂದ್ರಮ್ಮ ಮಲಗಿದ್ದ ವೇಳೆ ಚಾಕುವಿನಿಂದ ಕತ್ತು ಕುಯ್ದು ಹತ್ಯೆ ಮಾಡಿದ್ದಾನೆ. ನಂತರ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.