ಸದ್ಯದಲ್ಲಿ ಎಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತೇವೆ: ರಮೇಶ್ ಕುಮಾರ್ ವಿರುದ್ಧ ಸಚಿವ ಸುಧಾಕರ್ ಆಕ್ರೋಶ | ಜನತಾ ನ್ಯೂಸ್
ಚಿಕ್ಕಬಳ್ಳಾಪುರ : ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಎಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತೇವೆ ಎಂದು ಹೇಳಿದ್ದಾರೆ.
ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮಾಜಿ ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾರೇ ಬಂದ್ರೂ ಕೋಚಿಮುಲ್ ವಿಭಜನೆ ಮಾಡೇ ಮಾಡ್ತೇನೆ. ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆಯುವರಗೆ ನಾನು ಸುಮ್ಮನಿರೋಲ್ಲ. ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಹಾಗೂ ರಮೇಶ್ ಕುಮಾರ್ ಅಂತಹ 100 ಜನ ಬಂದ್ರೂ ಬಿಡಲ್ಲ ಇದು ನನ್ನ ಘೋಷಣೆ ಎಂದು ಕಿಡಿಕಾರಿದ್ದಾರೆ.
ಡಿಸಿಸಿ ಬ್ಯಾಂಕ್ ಭ್ರಷ್ಟಾಚಾರದ ಬಗ್ಗೆ ಮಹಾಭಾರತ ಬರೆಯಬಹದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ರಿಂಗ್ ಮಾಸ್ಟರ್. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಆಯಕ್ಟರ್ ಅಷ್ಟೆ. ಶ್ರೀನಿವಾಸಗೌಡರಿಗೂ ಡೈರೆಕ್ಷನ್ ಮಾಡೋಕೆ ಗೊತ್ತಿಲ್ಲ. ಡೈರೆಕ್ಟರ್- ಪ್ರೊಡ್ಯೂಸರ್ ಎಲ್ಲವೂ ಅವರೇ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಅವರು ಯತ್ನಿಸುತ್ತಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಶಾಸಕರು ತನ್ನ ಮಾತು ಕೇಳಬೇಕು ಅನ್ನೋದು ಅವರ ಆಸೆ ಎಂದು ರಮೇಶ್ ಕುಮಾರ್ ವಿರುದ್ಧ ಸುಧಾಕರ್ ಕಿಡಿಕಾರಿದರು.
ಇವತ್ತು ಜಿಲ್ಲಾ ಸಹಕಾರಿ ಬ್ಯಾಂಕಿಗೆ 2500 ಸಂಘಗಳನ್ನು ಮಾಡಿದ್ದೀವಿ. ಎಷ್ಟು ಕೋಟಿ ಸಾಲ ಕೊಟ್ಟಿದ್ದೀರಿ..? ತಾರತಮ್ಯ ಯಾಕೆ..? ಕೆಜಿಎಫ್ ಶ್ರೀನಿವಾಸಪುರಕ್ಕೆ ಮಾತ್ರನಾ..? ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆನಾ..? ನಿಮ್ಮ ಅಪ್ಪನಾ ಆಸ್ತಿನಾ ಡಿಸಿಸಿ ಬ್ಯಾಂಕ್..? ಇದು ಕೇಂದ್ರ ಸರ್ಕಾರದ ಹಣ. ಇದು ಗೋವಿಂದೇ ಗೌಡರದು ಅಲ್ಲ, ರಮೇಶ್ ಕುಮಾರ್ ದು ಅಲ್ಲ ಅಂತ ಹೇಳಬಯಸುತ್ತೇನೆ ಎಂದು ಕಿಡಿಕಾರಿದರು.
ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಪಾರದರ್ಶಕ ತನಿಖೆ ಆಗಬೇಕು ಅಂತ ನಾನು ಆಗ್ರಹಿಸಿದ್ರೆ ತನಿಖೆ ಬೇಡ ಎಂದು ತಡೆಯಾಜ್ಞೆ ತಂದಿದ್ದಾರೆ. ಸತ್ಯ ಆಚೆ ಬಂದರೆ ಜೈಲಿಗೆ ಹೋಗ್ತೀರಿ ಅಂತ ನಿಮಗೆ ಗೊತ್ತಿದೆ ಹೀಗಾಗಿ ತಡೆಯಾಜ್ಞೆತಂದಿದ್ದೀರಿ ಆದರೆ ನಾನು ಬಿಡೋದಿಲ್ಲ ಎಂದು ಸವಾಲ್ ಹಾಕಿದ್ದಾರೆ.