9 ವರ್ಷಗಳ ಬಳಿಕ ನಕ್ಸಲ್ ನಂಟು ಆರೋಪದಿಂದ ಮುಕ್ತ, ತಂದೆ-ಮಗ ನಿರ್ದೋಷಿ ಎಂದ ಕೋರ್ಟ್ | ಜನತಾ ನ್ಯೂಸ್
ಮಂಗಳೂರು : ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರು ನಿರ್ದೋಷಿಗಳು ಎಂದು ಗುರುವಾರ ಮೂರನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ, ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಈ ಆರೋಪಕ್ಕೆ ಒಳಗಾಗಿದ್ದರು.
ಬೆಳ್ತಂಗಡಿಯ ಕುತ್ಲೂರು ನಿವಾಸಿಯಾಗಿದ್ದ ವಿಠಲ್ ಮಲೆಕುಡಿಯ ಅವರನ್ನು 2012 ಮಾರ್ಚ್ 3 ರಂದು ನಕ್ಸಲ್ ನಿಗ್ರಹ ಪಡೆ ಬಂಧಿಸಿತ್ತು. ಸುಮಾರು ನಾಲ್ಕು ತಿಂಗಳು ಜೈಲು ಶಿಕ್ಷೆ ಅನುಭವಿಸಿದ ನಂತರ, ವಿಠಲ್ ಗೆ ಜಾಮೀನು ನೀಡಲಾಗಿತ್ತು .
2015 ರಲ್ಲಿ ಪೊಲೀಸರು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಸೆಷನ್ಸ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದರು. ನಕ್ಸಲ್ ನಿಗ್ರಹ ಪಡೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ವಿಠಲ್ 6 ನೇ ಆರೋಪಿಯಾಗಿದ್ದು, ತಂದೆ 7 ನೇ ಆರೋಪಿಯಾಗಿದ್ದರು.
ಈ ಪ್ರಕರಣ ದೇಶಾದ್ಯಂತ ಗಮನ ಸೆಳೆದಿದ್ದಲ್ಲದೆ ಭಾರಿ ಚರ್ಚೆ ಹುಟ್ಟು ಹಾಕಿತ್ತು. ವಿಠಲರ ಬಂಧನವಾದಾಗ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸೇರಿ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ನಾಯಕರು ಮಂಗಳೂರು ಜೈಲಿಗೆ ಭೇಟಿ ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ. ಜಕಾತಿ ಈ ಆದೇಶ ಪ್ರಕಟಿಸಿದರು. ಒಂಬತ್ತು ವರ್ಷಗಳಿಂದ ನಕ್ಸಲ್ ನಂಟು ಆರೋಪ ಎದುರಿಸುತ್ತಿದ್ದ ಇಬ್ಬರೂ ಈ ಮೂಲಕ ಅದರಿಂದ ಪಾರಾದಂತಾಗಿದೆ.