ಭಕ್ತರ ಸೋಗಿನಲ್ಲಿ ಜೈನ ದೇಗುಲದಲ್ಲಿ ಕಳ್ಳತನ! | ಜನತಾ ನ್ಯೂಸ್
ಬೆಂಗಳೂರು : ಜೈನ ಮಂದಿರಕ್ಕೆ ಭಕ್ತರ ಸೋಗಿನಲ್ಲಿ ತೆರಳಿ ಪೂಜಾ ಸಾಮಗ್ರಿಗಳನ್ನು ಕಳವು ಮಾಡುತ್ತಿದ್ದ ಮಹಿಳೆಯನ್ನು ನಗರದ ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಶಾಮಣ್ಣ ಗಾರ್ಡನ್ ನಿವಾಸಿ ಮುನ್ನಿ ಬಾನು(52) ಬಂಧಿತ ಮಹಿಳೆ. ಆಕೆಯಿಂದ ಸುಮಾರು 20 ಸಾವಿರ ಮೌಲ್ಯದ 379 ಗ್ರಾಂ ತೂಕದ ಬೆಳ್ಳಿ ಪೂಜೆ ಸಾಮಾನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಆರೋಪಿ ಮುನ್ನಿಬಾನು ಮೂಲದಲ್ಲಿ ಜೈನ ಸಮುದಾಯಕ್ಕೆ ಸೇರಿದ್ದಾಳೆ. ಜೈನ ಧರ್ಮದ ಸಂಪ್ರದಾಯ ಗೊತ್ತಿದ್ದ ಕಾರಣ ಜೈನ ಮಂದಿರಗಳನ್ನೇ ಟಾರ್ಗೆಟ್ ಮಾಡುತ್ತಿದ್ದಳು ಎನ್ನಲಾಗಿದೆ, ಹಲವು ವರ್ಷಗಳ ಹಿಂದೆ ಬೆಂಗಳೂರು ನಗರಕ್ಕೆ ಬಂದಿದ್ದು, ಮುಸ್ಲಿ ಸಮುದಾಯದ ವ್ಯಕ್ತಿಯನ್ನು ಪ್ರೀತಿಸಿ ವಿವಾಹವಾಗಿದ್ದಾಳೆ. ಆದರೆ, ಪತಿ ಮದ್ಯ ವ್ಯಸನಿಯಾಗಿದ್ದು, ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾನೆ.
ಅ.16ರಂದು ಮಾಗಡಿ ರಸ್ತೆಯಲ್ಲಿರುವ ಜೈನ ಮಂದಿರದಲ್ಲಿ ನಡೆದಿದ್ದ ದುರ್ಗಾಷ್ಟಮಿ ಹಬ್ಬದ ಪ್ರಯುಕ್ತ ಬೆಳ್ಳಿಯ ಪೂಜಾ ಸಾಮಗ್ರಿಯನ್ನು ತೆಗೆದು ಹೊರಗಿಟ್ಟಿದ್ದರು. ಈ ವೇಳೆ ಭಕ್ತರ ಸೋಗಿನಲ್ಲಿ ದೇಗುಲ ಪ್ರವೇಶಿಸಿದ ಮುನ್ನಿ ಬಾನು ಯಾರಿಗೂ ಗೊತ್ತಾಗದಂತೆ ಅವುಗಳನ್ನು ಕಳವು ಮಾಡಿ ಪರಾರಿಯಾಗಿದ್ದಳು.
ಈ ಹಿಂದೆ ಹಲವು ಬಾರಿ ಜೈನ ದೇವಾಲಯಗಳಲ್ಲಿ ಕಳವು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದಳು. ಬಳಿಕ ಜಾಮೀನಿನ ಮೇಲೆ ಹೊರಬಂದರೂ ಕಳವು ಚಾಳಿ ಮುಂದುವರಿಸಿದ್ದಳು. ಈ ಹಿಂದೆ ಈಕೆಯ ವಿರುದ್ಧ ಅಶೋಕನಗರ, ಜಯನಗರ, ವಿಜಯನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿವೆ.