ಕಾಲುವೆಗೆ ಬಿದ್ದ ಕಾರು ನಾಲ್ವರು ಯುವಕರ ಸಾವು, ಇಬ್ಬರ ಸ್ಥಿತಿ ಗಂಭೀರ! | ಜನತಾ ನ್ಯೂಸ್
ಬಾಗಲಕೋಟೆ : ಕಾರು ನಿಯಂತ್ರಣ ತಪ್ಪಿ ಘಟಪ್ರಭಾ ಕಾಲುವೆಗೆ ಬಿದ್ದು, ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ 6 ಮಂದಿ ಕಾರಿನಲ್ಲಿ ಮುಧೋಳದಿಂದ ಸಾಲಹಳ್ಳಿ ಕಡೆಯತ್ತ ಹೊರಟಿದ್ದರು. ಮಾರ್ಗಮಧ್ಯೆ, ಗುರುವಾರ ಮಧ್ಯರಾತ್ರಿ 12ರ ಸುಮಾರಿನಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ.
ಇಬ್ಬರು ಗಾಯಾಳುಗಳನ್ನು ಲೋಕಾಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರನ್ನು ಮಹಾದೇವಗೌಡ (27), ಎರಿತಾತಾ (26), ವಿಜಯ್ (26), ಸುನೀಲ (24) ಎಂದು ಗುರುತಿಸಲಾಗಿದ್ದು, ಕ್ರೇನ್ ಮೂಲಕ ಕಾಲುವೆಗೆ ಬಿದ್ದಿದ್ದ ಕಾರು, ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ.
ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.