ಬುರುಡೆ ಬೊಮ್ಮಾಯಿ..ಕೊರೊನಾ ವೇಳೆ ಜನ ಬದುಕಿದ್ದು ಅನ್ನಭಾಗ್ಯದಿಂದ ನಿಮ್ಮಿಂದ ಅಲ್ಲ! | ಜನತಾ ನ್ಯೂಸ್
ಬೆಂಗಳೂರು : ಬುರುಡೆ ರಾಮಯ್ಯ ಎಂದು ಟ್ವೀಟ್ ಮಾಡಿ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೂ 44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೇರಿದ್ದೀರಿ ಎಂದು ಟ್ವೀಟ್ ಮಾಡಿದ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು ಶನಿವಾರ "ಬುರುಡೆ ಬೊಮ್ಮಾಯಿ” ಎನ್ನುವ ಟ್ಯಾಗ್ ಬಳಸಿಕೊಂಡು ತಿರುಗೇಟು ನೀಡಿದ್ದಾರೆ.
ನಮ್ಮ ಸರ್ಕಾರದ ಯಾವ ಭಾಗ್ಯ ಯಾರಿಗೆ ಮುಟ್ಟಿದೆ ಎಂಬ ಲೆಕ್ಕಬೇಕಾ ಸಿಎಂ ಬೊಮ್ಮಾಯಿ ಅವರೇ? ಅಕ್ಕಿ ಪಡೆದ 1.10 ಕೋಟಿ ಕುಟುಂಬಗಳ 4 ಕೋಟಿ ಬಡವರ ಮನೆಗೆ ಹೋಗಿ ಕೇಳಿ ಉತ್ತರ ಕೊಟ್ಟಾರು. ಕೊರೊನಾ ಸೋಂಕಿನಿಂದ ಉದ್ಯೋಗ ಕಳೆದು ಕೊಂಡ ಜನ ಬದುಕಿದ್ದು ಅನ್ನಭಾಗ್ಯ ಅಕ್ಕಿಯಿಂದ, ಇಂದಿರಾ ಕ್ಯಾಂಟೀನ್ನಿಂದ.
ಪ್ರಧಾನಿ ಮೋದಿ ಅವರು ಹೇಳಿದಂತೆ ನೀವು ಬಡಿದ ತಟ್ಟೆ, ಹಚ್ಚಿದ ದೀಪದಿಂದ ಅಲ್ಲ. ನೀವು ನಿರ್ದಯಿಗಳು ನಾವು ಕೊಟ್ಟ ಅಕ್ಕಿಯನ್ನು ಕಸಿದುಕೊಳ್ಳಲು ಹೊರಟಿದ್ದೀರಿ ಎಂದು ಟ್ವೀಟ್ ಮೂಲಕ ಸಿಎಂ, ಪಿಎಂ ಇಬ್ಬರಿಗೆ ಸಿದ್ದರಾಮಯ್ಯ ಕುಟುಕಿದ್ದಾರೆ.
ಬಿಜೆಪಿ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಈಗಿನ ಸಾಲ ರೂ.4,57,899 ಕೋಟಿ. 2020-21 ರಲ್ಲಿಯೇ ಮಾಡಿರುವ ಸಾಲ ರೂ. 69,000 ಕೋಟಿ.ಕಳೆದ 4 ವರ್ಷಗಳಲ್ಲಿ ರಾಜ್ಯ ಸರ್ಕಾರ ರೂ.2,14,479 ಕೋಟಿ ಹೆಚ್ಚು ಸಾಲಮಾಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ 3 ವರ್ಷಗಳಲ್ಲಿ ಸುಮಾರು ರೂ.1,90,000 ಕೋಟಿ ಸಾಲ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಲದ ಪ್ರಮಾಣ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಒಟ್ಟಾರೆ ಶೇ. 94.18 ರಷ್ಟು ಏರಿಕೆಯಾಗಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ 2013-18 ರವರೆಗೆ ಏರಿಕೆಯಾಗಿದ್ದು ಶೇಕಡಾ 78 ರಷ್ಟು ಮಾತ್ರ.
ಕಳೆದ ಎರಡೂಕಾಲು ವರ್ಷಗಳ ರಾಜ್ಯ ಬಿಜೆಪಿ ಸರ್ಕಾರದ ಮತ್ತು ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳು ಜನರನ್ನು ಭ್ರಮನಿರಸನಗೊಳಿಸಿದೆ. 2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ.
ಲಾಕ್ ಡೌನ್ ಇದ್ದಾಗ ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡಿ, ಪ್ರತಿ BPL ಕುಟುಂಬಕ್ಕೆ 10 ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಒತ್ತಾಯಿಸಿದರೆ, ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದವರು ನಿಮ್ಮವರೇ ಅಲ್ಲವೇ ಬೊಮ್ಮಾಯಿ ಅವರೆ. ಜನರ ಕಷ್ಟಕಾಲದಲ್ಲಿ ನೆರವಿಗೆ ಧಾವಿಸದ ನಿಮ್ಮ ಸರ್ಕಾರ ಇದ್ದರೆಷ್ಟು ಹೋದರೆಷ್ಟು?
ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕೊಡ್ತೀವಿ ಎಂದು ಹೇಳಿ ಇವತ್ತಿನವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ. ನಿಮ್ಮ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ತಂದೆ, ತಾಯಿ ಕುಟುಂಬವನ್ನು ಕಳೆದುಕೊಂಡ ಸಾವಿರಾರು ಮಕ್ಕಳು ಅನಾಥವಾಗಿವೆ. ಈ ಅನಾಥ ಕಂದಮ್ಮಗಳ ಭವಿಷ್ಯಕ್ಕೆ ಯಾರು ದಿಕ್ಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿ.ಎಸ್.ಡಿ.ಪಿ ಯಲ್ಲಿ ಶೇಕಡಾವಾರು ಸಾಲದ ಪ್ರಮಾಣ ನಮ್ಮ ಸರ್ಕಾರದ ಅವಧಿಯಲ್ಲಿ 17 ರಿಂದ 20 ರ ಒಳಗೆ ಇತ್ತು. ಇದು ದೇಶದಲ್ಲಿಯೇ ಅತ್ಯುತ್ತಮ ನಿರ್ವಹಣೆಯಾಗಿತ್ತು. ಆದರೆ ಈಗ ಅದು 26.9 ರಷ್ಟಾಗಿದೆ. ನಿಯಮಗಳ ಪ್ರಕಾರ ಇದು 25% ಮೀರುವಂತಿಲ್ಲ.
— Siddaramaiah (@siddaramaiah) October 23, 2021
ಸಾಲಕ್ಕಾಗಿ ನಿಯಮಗಳನ್ನೇ ತಿದ್ದಿದವರು ನೀವಲ್ಲವೇ @BJP4Karnataka ?
5/9#ಬುರುಡೆಬೊಮ್ಮಾಯಿ