ಕನ್ನಡಕ್ಕಾಗಿ ನಾವು - ವಿಶೇಷ ಅಭಿಯಾನಕ್ಕೆ ಚಾಲನೆ: ಕನ್ನಡ ಉಳಿಸಿ ಬೆಳೆಸಲು ಸಚಿವ ವಿ.ಸುನಿಲ್ ಕುಮಾರ್ ಕರೆ | ಜನತಾ ನ್ಯೂಸ್
ಬೆಂಗಳೂರು : ಕನ್ನಡ ನಮ್ಮ ಸಂಸ್ಕೃತಿ. ಕನ್ನಡವನ್ನು ಉಳಿಸಿ ಬೆಳೆಸಲು ದೊಡ್ಡ ಪ್ರಮಾಣದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮನೆ ಮನೆಗಳಲ್ಲಿ ಹಾಗೂ ಮನ ಮನ ಗಳಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡ ವಾತಾವರಣ ನಿರ್ಮಾಣ ಆಗಬೇಕಿದೆ, ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ವಿ.ಸುನಿಲ್ ಕುಮಾರ್ ಕರೆ ನೀಡಿದರು.
ಅವರು ಇಂದು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ೬೬ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ "ಕನ್ನಡಕ್ಕಾಗಿ ನಾವು" ವಿಶೇಷ ಅಭಿಯಾನಕ್ಕಾಗಿ ರಚಿಸಲಾದ "ಮಾತಾಡ್ ಮಾತಾಡ್ ಕನ್ನಡ" ಎನ್ನುವ ಕಿರು ನಾಟಕಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
"ಮಾತಾಡ್ ಮಾತಾಡ್ ಕನ್ನಡ" ಎನ್ನುವ ಘೊಷವಾಕ್ಯದೊಂದಿಗೆ ಆರಂಭವಾದ ಈ ಅಭಿಯಾನ ಅಕ್ಟೋಬರ್ ೩೧ ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಾಡಿನಾಧ್ಯಂತ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ. ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ ಕುರಿತ ಹೆಮ್ಮೆ ಮೂಡಿಸಬೇಕು. ಕನ್ನಡಲ್ಲಿ ಸಹಿ ಮಾಡುವ ರೂಢಿ ಹೆಚ್ಚಾಗ ಬೇಕು. ಚರವಾಣಿಗಳಲ್ಲಿ ಕನ್ನಡ ಸಂದೇಶಗಳನ್ನು ಕಳಿಸುವ ಪದ್ಧತಿ ಶುರು ಆಗಬೇಕು. ಈ ಮೂಲಕ "ಕನ್ನಡಕ್ಕಾಗಿ ನಾವು" ಅಭಿಯಾನ ಯಶಸ್ವಿಯಾಗಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
"ಕನ್ನಡಕ್ಕಾಗಿ ನಾವು" ಅಭಿಯಾನದ ಹಿನ್ನೆಲೆಯಲ್ಲಿ ಅ.೨೮ ರಂದು ಬೆಳಗ್ಗೆ ೧೧ ಗಂಟೆಗೆ ಕನ್ನಡ ಗೀತೆಗಳನ್ನು ಸಾಮೂಹಿಕವಾಗಿ ಹಾಡುವ ವಿಶೇಷ ಪ್ರಯತ್ನ ಈ ಬಾರಿ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯಬ್ಬರು ಭಾಗವಹಿಸಬೇಕು. ಗುಂಪು ಗುಂಪಾಗಿ, ಕಚೇರಿಗಳ ಮುಂಭಾಗ, ಕಾರ್ಖಾನೆಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ, ಗಡಿನಾಡು, ಹೊರನಾಡುಗಳಲ್ಲಿಯೂ ಕನ್ನಡದ ಗೀತೆಗಳನ್ನು ಹಾಡಬೇಕಿದೆ, ಎಂದು ಸಚಿವರು ತಿಳಿಸಿದರು.
ಕುವೆಂಪು ಭಾಷಾ ಭಾರತಿಯಿಂದ ಪ್ರಕಟಿಸಿರುವ, ಕನ್ನಡೇತರರಿಗೆ ಕನ್ನಡ ಕಲಿಸುವ, ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಿದರು. ಲಾಲ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಕನ್ನಡ ಅಭಿಯಾನದ ಸ್ವಯಂ ಭಾವ ಚಿತ್ರ ಕೇಂದ್ರದಲ್ಲಿ( ಸೆಲ್ಫಿ) ಸ್ವತಃ ಸಚಿವರೇ ಸ್ವಯಂ ಭಾವಚಿತ್ರ ತೆಗೆದುಕೊಂಡು ಉದ್ಘಾಟಿಸಿದರು. ನಂತರ ಮೆಟ್ರೋ ನಿಲ್ದಾಣದಲ್ಲಿ ಮಾತಾಡ್ ಮಾತಾಡ್ ಕನ್ನಡ ಘೋಷ ವಾಕ್ಯದ ಭಿತ್ತಿ ಪತ್ರಗಳನ್ನು ಅಂಟಿಸಿದರು.
ಅಭಿಯಾನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರಿನ ರಂಗಾಯಣ ಹಮ್ಮಿಕೊಂಡಿರುವ ಡಾ.ಎಸ್.ಎಲ್.ಬೈರಪ್ಪ ಅವರ ಕಾದಂಭರಿ ಆಧಾರಿತ "ಪರ್ವ" ನಾಟಕಕ್ಕೆ ಸಚಿವರು ಚಾಲನೆ ನೀಡಿದರು. "ಕನ್ನಡಕ್ಕಾಗಿ ನಾವು" ಅಭಿಯಾನದ ಹಿನ್ನೆಲೆಯಲ್ಲಿ ತಯಾರಿಸಲಾದ ವಿವಿಧ ವಿಡಿಯೋ ಪ್ರದರ್ಶನದ ಎಲ್.ಇ.ಡಿ ಪರದೆ ಹೊಂದಿರುವ ವಾಹನಕ್ಕೆ ಚಾಲನೆ ನೀಡಿದರು.
ಕಾಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಳಾ, ಇಲಾಖೆಯ ನಿರ್ದೇಶಕ ರಂಗಪ್ಪ ಹಾಗೂ ಇತರರು ಹಾಜರಿದ್ದರು.