ಪ್ರಿಯತಮೆ ಕೈಕೊಟ್ಟಳು ಎಂದು ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣು! | ಜನತಾ ನ್ಯೂಸ್
ಬೆಂಗಳೂರು : ರಾಜರಾಜೇಶ್ವರಿ ನಗರದ ಮರಪ್ಪ ಲೇಔಟ್ನಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಂಡು ಕಾರ್ತಿಕ್(29) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
29 ವರ್ಷದ ಕಾರ್ತಿಕ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಈತ ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ. ಆದರೆ ಇತ್ತೀಚೆಗೆ ಯುವತಿಯು ದೂರವಾಗಿದ್ದರಿಂದ ಕಾರ್ತಿಕ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.
ಈ ವಿಚಾರ ತಿಳಿದ ಪೋಷಕರು ಮದುವೆ ಮಾಡಲು ಮುಂದಾಗಿದ್ದರು. ಇಂದು ಕಾರ್ತಿಕ್ಗೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಪೋಷಕರು ಹೋಗಬೇಕಿತ್ತು. ಅದರೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯ ಶೀಟ್ ಹ್ಯಾಂಗಲ್ಗೆ ನೇಣು ಬಿಗಿದುಕೊಂಡು ಯುವಕ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೂ ಮುನ್ನ ಪ್ರೇಮ ವೈಫಲ್ಯ ಬಗ್ಗೆ ಕಾರ್ತಿಕ್ ವಿಡಿಯೋ ಮಾಡಿದ್ದಾರೆ. ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿ ನಂತರ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ರಾಜರಾಜೇಶ್ವರಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.