ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂಸ್
ಹೊಸಕೋಟೆ : ಪ್ರೇಯಸಿಯನ್ನ ಉಸಿರುಗಟ್ಟಿಸಿ ಹತ್ಯೆಗೈದು ಬಳಿಕ ತಾನು ವಿಷ ಸೇವಿಸಿ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಲಿಂಗಧೀರಮಲ್ಲಸಂದ್ರ ಗ್ರಾಮದಲ್ಲಿ ನಡೆದಿದೆ.
ಅಂಕೋಲಾ ಮೂಲದ ಉಷಾ(25) ಎಂಬುವ ಯುವತಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ವಿಷ ಸೇವಿಸಿ ತಮಿಳುನಾಡಿನ ಗೋಪಾಲಕೃಷ್ಣ(30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉಷಾ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಬೇರೊಂದು ಖಾಸಗಿ ಕಂಪನಿಯಲ್ಲಿ ಗೋಪಾಲಕೃಷ್ಣ ಕೂಡ ಕೆಲಸ ಮಾಡುತ್ತಿದ್ದ.
ಗೋಪಾಲಕೃಷ್ಣ ಹಾಗೂ ಉಷಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಉಷಾ ಮನೆಯವರು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದ ವಿಷಯ ತಿಳಿದ ಗೋಪಾಲಕೃಷ್ಣ ಕೋಪಗೊಂಡಿದ್ದನು.
ಇದರಿಂದ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದ್ದು, ಯುವತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಬಂದಿದ್ದ ಗೋಪಾಲ ಕೃಷ್ಣ, ತಲೆದಿಂಬಿನಿಂದ ಉಸಿರುಗಟ್ಟಿಸಿ ಉಷಾಳನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಬಳಿಕ ತರಬಹಳ್ಳಿ ಗ್ರಾಮದ ಬಳಿ ಗೋಪಾಲ ಕೃಷ್ಣ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅನುಗೊಂಡನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.