ರಾಮನಗರ ಚನ್ನಪಟ್ಟಣದ ನೀರಿನ ಟ್ಯಾಂಕ್ನಲ್ಲಿ ಮತ್ತೆ ಮಾಂಸದ ಮುದ್ದೆ ಪತ್ತೆ! | ಜನತಾ ನ್ಯೂಸ್
ರಾಮನಗರ : ರಾಮನಗರ ಚನ್ನಪಟ್ಟಣದ ನೀರಿನ ಟ್ಯಾಂಕ್ನಲ್ಲಿ ಅ.9ರಂದು ಮಹಿಳೆ ಕಾಲು ಪತ್ತೆ ಯಾಗಿತ್ತು. ಮತ್ತೊಮ್ಮೆ ಮಾಂಸದ ಮುದ್ದೆಗಳು ಪತ್ತೆಯಾಗಿದ್ದು, ಚನ್ನಪಟ್ಟಣದ ಜನತೆಯಲ್ಲಿ ಭಯ ಹುಟ್ಟಿಸಿದೆ.
ಅ. 9ರಂದು ಚನ್ನಪಟ್ಟಣ ನಗರದ ಕೋರ್ಟ್ ಬಳಿಯ ಓವರ್ ಹೆಡ್ ವಾಟರ್ ಟ್ಯಾಂಕ್ನಲ್ಲಿ ಅಪರಿಚಿತ ಮಹಿಳೆಯ ಶವದ ಕಾಲೊಂದು ಪತ್ತೆಯಾಗಿತ್ತು. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿತ್ತು. ಆದರೆ ಅವರ ಇಡೀ ದೇಹ ಸಿಕ್ಕಿರಲಿಲ್ಲ.
ಆದ್ದರಿಂದ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಅಥವಾ ಅವರನ್ನು ಕೊಲೆ ಮಾಡಿ ದೇಹವನ್ನು ತುಂಡು ತುಂಡು ಮಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೆಂದು ಕೂಡ ಶಂಕಿಸಲಾಗಿದೆ.
ಆ ಓವರ್ ಹೆಡ್ ಟ್ಯಾಂಕ್ನಿಂದ ಪಟ್ಟಣಕ್ಕೆ ವಿವಿಧ ಭಾಗಗಳಿಗೆ ಪೂರೈಕೆಯಾಗುವ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಎಲ್ಲೆಲ್ಲಿ ವಾಲ್ ಪೈಪ್ಗಳಿವೆಯೋ ಅಲ್ಲಲ್ಲಿ ಕೊಳವೆಗಳನ್ನು ಕತ್ತರಿಸಿ ಪರಿಶೀಲಿಸಲಾಗಿತ್ತು. ದೇಹದ ಅಂಗಗಳು ನೀರಿನ ಕೊಳವೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಅಂಗಾಂಗಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಾರ್ಯಾಚರಣೆ ಇನ್ನು ಮುಂದುವರೆದಿದ್ದು, ಸಿಕ್ಕ ಮಾಂಸದ ಮುದ್ದೆ ಅದೇ ಮಹಿಳೆಗೆ ಸೇರಿದ್ದೋ ಅಥವಾ ಬೇರೆಯವರಿಗೆ ಸೇರಿದ್ದೋ ಎಂಬುದು ಎಫ್ಎಸ್ಎಲ್ ವರದಿ ಬಂದ ಬಳಿಕ ಅದು ಖಚಿತವಾಗಲಿದೆ.
ಆದರೆ ಪದೇ ಪದೇ ನೀರಿನ ಕೊಳವೆಯಲ್ಲಿ ಈ ರೀತಿ ಮಾನವ ಅಂಗಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.