ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಡೆತ್ ನೋಟ್ ಪತ್ತೆ! | ಜನತಾ ನ್ಯೂಸ್
ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ನಗರದ ರ್ಮೋರ್ಗನ್ಸ್ ಗೇಟ್ ಬಳಿಯ ಮೋರ್ಗನ್ಸ್ಟ್ರೀಟ್ ಎಂಬಲ್ಲಿ ಬುಧವಾರ ನಡೆದಿದೆ.
ಮೃತರನ್ನು ನಾಗೇಶ್ ಶೇರಿಗುಪ್ಪಿ, ಅವರ ಪತ್ನಿ ವಿಜಯಲಕ್ಷ್ಮೀ(26), ಮಕ್ಕಳಾದ ಸ್ವಪ್ನಾ(8) ಮತ್ತು ಸಮರ್ಥ್(4) ಎಂದು ಗುರುತಿಸಲಾಗಿದೆ.
ನಾಗೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಆತ್ಮಹತ್ಯೆಗೂ ಮುನ್ನ ಪತ್ನಿ ಮತ್ತುಇಬ್ಬರು ಮಕ್ಕಳಿಗೆ ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ಹತ್ಯೆ ಮಾಡಿದ್ದಾನೆ. ಇವರು ಬಾಗಲಕೋಟೆ ಜಿಲ್ಲೆಯ ಬೀಳಗಿ ಗ್ರಾಮದ ಸುನಗ್ ಗ್ರಾಮದವರಾಗಿದ್ದಾರೆ. ನಾಗೇಶ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.
ನಾಗೇಶ್ ಬರೆದಿದ್ದೆನ್ನಲಾದ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ ನೂರ್ ಜಹಾನ್ ಎಂಬ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ತನ್ನ ಪತ್ನಿ ವಿಜಯಲಕ್ಷ್ಮೀಯು ನೂರ್ ಜಹಾನ್ ಎಂಬ ಮಹಿಳೆ ಜೊತೆ ಜಾಸ್ತಿ ಸಂಪರ್ಕದಲ್ಲಿದ್ದಳು, ಅಲ್ಲದೆ ಮತಾಂತರ ಪ್ರಯತ್ನ ನಡೆದಿತ್ತು ಎಂದು ನಾಗೇಶ್ ಬರೆದಿಟ್ಟಿರುವ ಡೆತ್ ನೋಟಿನಲ್ಲಿ ಉಲ್ಲೇಖಿಸಿದ್ದಾನೆ. ಆದರೆ ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ ವಿಜಯಲಕ್ಷ್ಮೀ ನೂರ್ ಜಹಾನ್ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಇದು ನಾಗೇಶ್ ಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಎಲ್ಲೂ ಕೆಲಸಕ್ಕೆ ಹೋಗಬೇಡ, ಮನೆಯಲ್ಲೇ ಬಿದ್ದಿರು ಅಂತ ಆತ ಪತ್ನಿಗೆ ಹೊಡೆಯುತ್ತಿದ್ದ ಎಂದು ತಿಳಿದುಬಂದಿದೆ
ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ತನ್ನ ಪತ್ನಿ ವಿಜಯಲಕ್ಷ್ಮಿ ಬೇರೆ ಧರ್ಮದ ಯುವತಿಯ ಜೊತೆ ಕೆಲಸ ಮಾಡುತ್ತಿದ್ದು, ಅವರು ಮತಾಂತರ ಮಾಡಲು ಆಕೆಯನ್ನು ಪ್ರಯತ್ನಿಸುತ್ತಿದ್ದರಂತೆ. ಆ ಕಾರಣಕ್ಕೆ ಕೃತ್ಯ ಎಸಗಿದ್ದೇನೆ ಎಂದು ಆತ ಡೆತ್ನೋಟ್ನಲ್ಲಿ ಬರೆದಿದ್ದಾನೆ ಎಂದು ತಿಳಿಸಿದರು.
ನಾಗೇಶ್ ಮತ್ತು ವಿಜಯಲಕ್ಷ್ಮೀ ಜೊತೆ ಆಗಾಗ ಜಗಳವಾಗುತ್ತಿದ್ದು, ಈ ಹಿಂದೆ ವಿಜಯಲಕ್ಷ್ಮಿ ಮನೆ ಬಿಟ್ಟು ಹೋಗಿದ್ದರು. ಈ ಕುರಿತಂತೆ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಇಬ್ಬರನ್ನು ಕರೆಸಿ ಬುದ್ಧಿ ಹೇಳಿ ಕಳುಹಿಸಲಾಗಿತ್ತು.
ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.