ಮಂಗಳವಾರ ಸಿಎಂ ಮನೆ ಮುಂದೆ ಧರಣಿ ರೇವಣ್ಣ ಘೋಷಣೆ | ಜನತಾ ನ್ಯೂಸ್
ಹಾಸನ : ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಸರ್ಕಾರದ ಈ ತಾರತಮ್ಯ ಖಂಡಿಸಿ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಮನೆ ಎದುರು ಧರಣಿ ಮಾಡುತ್ತೇನೆ ಎಂದು ಎಚ್. ಡಿ.ರೇವಣ್ಣ ಎಂದಿದ್ದಾರೆ.
ಹೊಳೆನರಸೀಪುರದಲ್ಲಿ ಎಂಎಸ್ಸಿ ಫುಡ್ ಅಂಡ್ ನ್ಯೂಟ್ರಿಷಿಯನ್ ಕೋರ್ಸ್ ಅನುಮತಿ ಕೋರಿದ್ದರು. ಯೂನಿವರ್ಸಿಟಿ ಅನುಮತಿಕೊಟ್ಟರೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ನೀಡಿಲ್ಲ ಎಂದು ರೇವಣ್ಣ ಆರೋಪಿಸಿದ್ದಾರೆ.
ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಮನೆ ಎದುರು ಧರಣಿ ಮಾಡುತ್ತೇನೆ. ನಾನು ಅಲ್ಲೇ ಕೂರುತ್ತೇನೆ, ನನ್ನ ಪ್ರಾಣ ಹೋದರೆ ಹೋಗಲಿ, ಅರೆಸ್ಟ್ ಮಾಡ್ತಾರಾ ಮಾಡಲಿ, ಇಂತಾ ಕೀಳು ಮಟ್ಟದ ರಾಜಕಾರಣ ಮಾಡಬೇಡಿ ಎಂದು ಎಚ್. ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಈ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಖಾಸಗಿಯವರ ಹಿಡಿತದಲ್ಲಿದೆ. ಸರ್ಕಾರ ಖಾಸಗಿಯವರ ಗುಲಾಮರಂತೆ ವರ್ತಿಸುತ್ತಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು, ಬಡವರ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಲ್ಲು ಹಾಕುತ್ತಿದ್ದಾರೆ. ಇಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು. ಮಾನ ಮರ್ಯಾದೆ ಇದೆಯಾ ಇವರಿಗೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲೆಗೆ ಅನ್ಯಾಯ ಆದಾಗ ನೀವು ಎದ್ದೇಳಬೇಕು ಎಂದು ನಾನು ಜೆಡಿಎಸ್ ವರಿಷ್ಠ ದೇವೇಗೌಡ ಅವರಿಗೆ ಕೋರುತ್ತೆನೆ. ಜನರು ನಿಮಗೆ ಅಧಿಕಾರ ನೀಡಿದಾರೆ, ಹಾಗಾಗಿ ನೀವು ಜನರ ಪರವಾಗಿ ಸಿಡಿದೇಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಲೂಟಿಕೋರರ ಕೈ ಸೇರಿದೆ. ಇವರನ್ನು ಶಿಕ್ಷಣ ಸಚಿವರು ಎನ್ನೋದಕ್ಕೆ ನಾಚಿಕೆ ಆಗಬೇಕು. ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆ ಎಂಬುದು ತಿಳಿಯಲಿದೆ. ನಾನು ಕೂಡ ಅಲ್ಲಿಯವರೆಗೂ ಇರುತ್ತೇನೆ. ಇಂತಹ ಶಿಕ್ಷಣ ಸಚಿವರಿಂದ ಸರ್ಕಾರ ಕ್ಕೂ ಕೆಟ್ಟ ಹೆಸರು ಬರುತ್ತಿದೆ ಎಂದು ಕಿಡಿಕಾರಿದರು.