ಹಿಜಾಬ್ ವಿಷಯ ಇಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡಬೇಕಾದ ಅವಶ್ಯಕತೆ ಇಲ್ಲ | ಜನತಾ ನ್ಯೂಸ್
ಚಿಕ್ಕಬಳ್ಳಾಪುರ : ಹಿಜಾಬ್ ವಿಷಯ ಇಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಸರಿಯಾದ ಮಾಹಿತಿ ಇಲ್ಲದೆ ಸಿದ್ದರಾಮಯ್ಯನವರು ಆ ರೀತಿ ಆರೋಪ ಮಾಡಿರಬಹುದು. ಕೆಲವರು ಬಿಜೆಪಿಯ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಬ್ ಕೆ ಸಾಥ್ ಸಬ್ ಕೆ ವಿಶ್ವಾಸ್ ಎಂದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಟೊಂಕ ಕಟ್ಟಿದ್ದಾರೆ ಎಂದರು.
ಅಂಬೇಡ್ಕರ್ರವರು ಪ್ರತಿಪಾದಿಸಿದಂತೆ ಈ ದೇಶದ ಎಲ್ಲ ಜನರು ಸಮಾನರು ಎನ್ನುವ ಚಿಂತನೆಯೇ ಬಿಜೆಪಿ ಪಕ್ಷದ ಚಿಂತನೆ ಆಗಿದೆ. ಹೀಗಾಗಿ ನಮ್ಮ ಪಕ್ಷ ಹಿಜಬ್ ವಿವಾದದ ಹಿಂದೆ ಇಲ್ಲ. ನಾವು ಯಾರ ಮನಸ್ಸಿಗೂ ಘಾಸಿಯಾಗದಂತೆ ನಡೆದುಕೊಳ್ಳಬೇಕು ಎಂಬುದನ್ನು ನಾನು ಮೊದಲೇ ಹೇಳಿದ್ದೇನೆ ಎಂದರು.
ಶಾಲೆಗಳಲ್ಲಿ ಶ್ರೀಮಂತರು, ಬಡವರು ಇರುತ್ತಾರೆ. ಶ್ರೀಮಂತರು ಏನು ಬೇಕಾದರೂ ಹಾಕಿಕೊಳ್ಳಬಹುದು. ಆದರೆ ಇದಕ್ಕೆ ಅವಕಾಶವಿಲ್ಲ. ನಾವೆಲ್ಲರೂ ಸಮಾನರು ಎಂಬುದೇ ಮುಖ್ಯ. ಪಠ್ಯ ಪುಸ್ತಕ ಹೇಗೋ ಹಾಗೇ, ಎಲ್ಲರಿಗೂ ಒಂದೇ ಕೊಡ್ತಾರೆ. ಹಾಗೇ ಸಮವಸ್ತ್ರಗಳು.. ಸಮವಸ್ತ್ರಗಳು ಹೇಗೆ ಸಮಾನವಾಗಿ ಇರುತ್ತದೋ ಹಾಗೇ ಇರಬೇಕು. ಸಮಾನತೆಯನ್ನು ಸಾಧಿಸಲು ಇದು ಸಾಧ್ಯ. ಎಲ್ಲರೂ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲ ಧರ್ಮದವರು ಇದಕ್ಕೆ ಒಪ್ಪಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಹಿಜಬ್ ವಿಚಾರದಲ್ಲಿ ನಾನು ರಾಜ್ಯದ ಜನರಿಗೆ ವಿದ್ಯಾರ್ಥಿಗಳಿಗೆ ಒಂದು ಮನವಿ ಮಾಡ್ತೇನೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಬದ್ದರಾಗಬೇಕಾಗುತ್ತೆ ಎಂದರು.