ಮೀನು ಮಾರಾಟಗಾರನ ವಾಹನ ಅಡ್ಡಗಟ್ಟಿ, ತಲವಾರು ತೋರಿಸಿ 2 ಲಕ್ಷ ರೂ. ದೋಚಿ ಪರಾರಿ! | ಜನತಾ ನ್ಯೂಸ್
ಮಂಗಳೂರು : ಮೀನು ವ್ಯಾಪಾರಿಯೊಬ್ಬರ ಟೆಂಪೋ ಅಡ್ಡಗಟ್ಟಿ ತಲವಾರಿನಿಂದ ಕಡಿದು ಟೆಂಪೋದಲ್ಲಿದ್ದ ರೂ. 2 ಲಕ್ಷ ದರೋಡೆ ನಡೆಸಿರುವ ಘಟನೆ ರಾ.ಹೆ.66 ರ ನೇತ್ರಾವತಿ ಸೇತುವೆ ಸಮೀಪ ಇಂದು ನಸುಕಿನ ಜಾವ ಸಂಭವಿಸಿದೆ.
ಉಳ್ಳಾಲದ ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಮುಸ್ತಾಫ ಹಲ್ಲೆಗೊಳಗಾದವರು. ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಸಮೀಪ ಮೀನು ಮಾರಾಟ ಮಾಡುತ್ತಿದ್ದ ವೇಳೆ ತೊಕ್ಕೊಟ್ಟು ಕಡೆಯಿಂದ ಕೆಂಪು ಬಣ್ಣದ ಕಾರಿನಲ್ಲಿ ಬಂದ ತಂಡವೊಂದು, ಮುಸ್ತಾಫ ಅವರ ಟೆಂಪೋ ಹಿಂಬಾಲಿಸಿ ನೇತ್ರಾವತಿ ಸೇತುವೆ ಸಮೀಪ ಅಡ್ಡಗಟ್ಟಿದೆ.
ಬಳಿಕ ನಿರಂತರ ಹಾರ್ನ್ ಹಾಕುವುದನ್ನು ಪ್ರಶ್ನಿಸಲು ಮುಸ್ತಾಫ ಅವರು ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಮುಸುಕುಧಾರಿಗಳು ಇಳಿದು ತಲವಾರಿನಿಂದ ದಾಳಿ ನಡೆಸಿದ್ದಾರೆ. ಅಲ್ಲದೇ ಟೆಂಪೋದಲ್ಲಿಟ್ಟ 2 ಲಕ್ಷ ರೂ. ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಕೈಯಿಂದ ತಲವಾರನ್ನು ತಡೆದಾಗ ಎರಡೂ ಕೈಗಳಿಗೂ ಗಾಯಗಳಾಗಿವೆ.
ಸ್ಕೂಟರ್ನಲ್ಲಿ ರಸ್ತೆ ಮೇಲೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಗಾಯಾಳು ಮುಸ್ತಾಫ ಅವರನ್ನು ನೋಡಿ, ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.