ಅರ್ಧದಲ್ಲೇ ನಿಂತ ಪ್ಯಾಸೆಂಜರ್ ಟ್ರೈನ್, ಹಳಿ ಮೇಲೆ ನಿಂತಿದ್ದ ಮೈಮೇಲೆ ಹರಿದ ಎಕ್ಸ್ಪ್ರೆಸ್ ರೈಲು! | ಜನತಾ ನ್ಯೂಸ್
ಕೋಲಾರ : ಪ್ಯಾಸೆಂಜರ್ ರೈಲಿಂದ ಇಳಿದು ಹಳಿ ಮೇಲೆ ಕುಳಿತಿದ್ದ ಪ್ರಯಾಣಿಕನ ಮೇಲೆ ಹರಿದು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಪ್ರಯಾಣಿಕರನ್ನು ತುಂಬಿಕೊಂಡು ಮಾರಿಕುಪ್ಪಂನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ಸ್ವರ್ಣ ಟ್ರೈನ್, ಸಿಗ್ನಲ್ ಸಮಸ್ಯೆಯಿಂದ ಟೇಕಲ್ ಸ್ಟೇಷನ್ನಲ್ಲಿ ಟ್ರ್ಯಾಕ್ ಮೇಲೆಯೇ ನಿಂತಿತ್ತು. ಈ ವೇಳೆ ಮೈಸೂರಿನಿಂದ ಚೆನ್ನೈ ಕಡೆಗೆ ಎಕ್ಸ್ಪ್ರೆಸ್ ರೈಲು ಹೋಗುತ್ತಿತ್ತು. ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ರೈಲಿನಿಂದ ಪ್ರಯಾಣಿಕರು ಇಳಿಯುತ್ತಿದ್ದರು.
ಅದೇ ಸಂದರ್ಭದಲ್ಲಿ ಎಕ್ಸ್ಪ್ರೆಸ್ ರೈಲಿಗೆ ರೈಲ್ವೆ ಅಧಿಕಾರಿಗಳು ಸಿಗ್ನಲ್ ನೀಡಿದ್ದು, ಈ ವೇಳೆ ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್ಪ್ರೆಸ್ ರೈಲು ವೇಗವಾಗಿ ನುಗ್ಗಿ ಬಂದಿದ್ದು, ಪ್ರಯಾಣಿಕರು ಬಚಾವ್ ಆಗಲು ಯತ್ನಿಸುವ ವೇಳೆಗೆ ಡಿಕ್ಕಿ ಹೊಡೆದಿದೆ.
ಜನ ರೈಲು ಹಳಿಗಳ ಮೇಲೆ ನಿಂತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಸತತವಾಗಿ ಹಾರ್ನ್ ಮಾಡಿದ್ದಾರೆ. ಈ ವೇಳೆ ಹಲವರು ಹಳಿಯಿಂದ ಪಕ್ಕಕ್ಕೆ ಸರಿದಿದ್ದಾರೆ. ಪ್ರಯಾಣಿಕರ ಮೇಲೆ ಎಕ್ಸ್ಪ್ರೆಸ್ ರೈಲು ಹರಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ.
ಮೃತನನ್ನು 24 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಶಾಬಾಜ್ ಅಹ್ಮದ್ ಷರೀಫ್ ಎಂದು ಗುರುತಿಸಲಾಗಿದ್ದು, ಈತ ಬಂಗಾರಪೇಟೆ ನಿವಾಸಿ ಎನ್ನಲಾಗಿದೆ. ಶಬಾಜ್ ಅಹ್ಮದ್ ಷರೀಫ್ ಬೆಂಗಳೂರಿನ ರಾಜಾಜಿನಗರದಲ್ಲಿರುವ ವಿಂಧ್ಯಾ ಇನ್ಫೋಟೆಕ್ ಸಲ್ಯೂಷನ್ಸ್ನಲ್ಲಿ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.
ಈ ದುರಂತಕ್ಕೆ ಸ್ಟೇಷನ್ ಮಾಸ್ಟರ್ನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಮತ್ತು ಇತರ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.