ಪ್ರೀತಿಸಿ ಮದುವೆಯಾದ 7 ದಿನಕ್ಕೆ ಪತಿ ಪರಾರಿ! | JANATA NEWS
ತುಮಕೂರು : ಮನೆಯವರ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಪ್ರೇಯಸಿಯ ಕುತ್ತಿಗೆಗೆ ತಾಳಿ ಕಟ್ಟಿದ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಕೂಡ ಮಾಡಿಸಿಕೊಂಡ ಯುವಕ, 7ನೇ ದಿನಕ್ಕೆ ಯುವಕ ಎಸ್ಕೇಪ್ ಆಗಿದ್ದಾನೆ.
ತಿಪಟೂರು ತಾಲೂಕಿನ ಹಟ್ನ ಗ್ರಾಮದ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಚೈತ್ರಾ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ ನಿಖಿಲ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.
ತುರುವೇಕೆರೆಯ ಮೊಬೈಲ್ ಅಂಗಡಿಯಲ್ಲಿ ಚೈತ್ರಾ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ನಿಖಿಲ್ ಅದೇ ಮೊಬೈಲ್ ಅಂಗಡಿಯ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಒಂದು ವರ್ಷದಿಂದ ಪ್ರೀತಿಸಿದ್ದ ಜೋಡಿ ಚೈತ್ರಾ ಮನೆಯವರ ವಿರೋಧದ ನಡುವೆಯೂ ಫೆಬ್ರವರಿ 4ರಂದು ಓಡಿ ಹೋಗಿ ಮದುವೆಯಾಗಿದ್ದರು.
ಫೆಬ್ರವರಿ 7ರಂದು ರಿಜಿಸ್ಟ್ರಾರ್ ಮ್ಯಾರೇಜ್ ಕೂಡ ಆಗಿದ್ದರು. ತಿಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ಮನೆ ಮಾಡಿದ್ದ ಪ್ರೇಮಿಗಳಿಬ್ಬರೂ 6 ದಿನ ಒಟ್ಟಿಗೆ ವಾಸವಿದ್ದರು. ಮದ್ವೆಯಾದ 7ನೇ ದಿನಕ್ಕೆ ಯುವಕ ಎಸ್ಕೇಪ್ ಆಗಿದ್ದಾನೆ.
ಫೆಬ್ರವರಿ 10ರಂದು ಇದ್ದಕ್ಕಿದ್ದಂತೆ ತಾಯಿಗೆ ಹುಷಾರಿಲ್ಲ. ಅವರನ್ನು ನೋಡಿಕೊಂಡು ಬರುವೆ ಎಂದು ತಿಪಟೂರಿಗೆ ಹೋದ ನಿಖಿಲ್ ವಾಪಸ್ ಬಂದಿಲ್ಲ. ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ನಿಖಿಲ್ನ ಎರಡೂ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಪತಿ ಹುಡುಕಿಕೊಂಡು ಚೈತ್ರಾ ಪರವಗೊಂಡನಹಳ್ಳಿಯ ನಿಖಿಲ್ ಮನೆಗೆ ಹೋಗಿದ್ದು, ನಿಖಿಲ್ ತಂದೆ ಬಸವರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಮೇಲೆ ಕಂಪ್ಲೇಂಟ್ ಕೊಡುತ್ತೇನೆ ಎಂಬ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಚೈತ್ರಾ ಗಂಡನನ್ನು ಹುಡುಕಿಕೊಡುವಂತೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.