ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ರಾಜಿನಾಮೆಗೆ ಹೋರಾಡಿತ್ತು ಬಿಜೆಪಿ : ಸಚಿವ ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ | JANATA NEWS
ಕಾರವಾರ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಚಿವ ಕೆ.ಎಸ್.ಈಶ್ವರಪ್ಪ ನವರ ಪ್ರಚೋದನೆಯೇ ಕಾರಣವಾಗಿರುವುದರಿಂದ ಕೂಡಲೇ ಅವರನ್ನು ಬಂಧಿಸಿ ವಿಚಾರಣೆ ಆರಂಭಿಸಬೇಕು, ಎಂದು ಕಾಂಗ್ರೆಸ್ ಆಗ್ರಹಪಡಿಸುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಸಂತೋಷ ಪಾಟೀಲ್ ರವರು ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿದ್ದು, ಪಂಚಾಯತ್ ರಾಜ್ ಇಲಾಖೆ ಯಲ್ಲಿ ಸುಮಾರು ನಾಲ್ಕು ಕೋಟಿ ಕಾಮಗಾರಿ ನಡೆಸಿದ್ದರು. ಆದರೆ ಈ ಕಾಮಗಾರಿ ಬಿಲ್ ಮಂಜೂರಿ ಮಾಡಲು ಸಚಿವ ಈಶ್ವರಪ್ಪರವರು ಶೇ.40 ರಷ್ಟು ಕಮಿಷನ್ ಕೇಳಿ ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಸ್ವತಃ ಸಂತೋಷ್ ದೇಶದ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಿಗೆ ಪತ್ರ ಮುಖೇನ ದೂರು ಸಹ ನೀಡಿದ್ದರು.
ಈ ಹಿನ್ನಲೆಯಲ್ಲಿ ಕಳೆದ ವಿಧಾನಸಭಾ ಅಧಿವೇಶನ ದಲ್ಲಿ ಬಿಜೆಪಿ ಸರಕಾರದ 40% ಕಮಿಷನ್ ಕುರಿತು ರಾದ್ದಾಂತ ನಡೆದು ವಿರೋಧಪಕ್ಷಗಳು ಸಚಿವ ಈಶ್ವರಪ್ಪರವರ ರಾಜೀನಾಮೆಗೆ ಒತ್ತಾಯ ಮಾಡಿತ್ತು. ಇದೀಗ ಮೃತ ಸಂತೋಷ್ ಪಾಟೀಲ್ ಸ್ವತಃ ಬರೆದಿರುವ ಮರಣ ಪತ್ರ ದಲ್ಲಿ ಸಚಿವ ಈಶ್ವರಪ್ಪನವರು ತನ್ನ ಸಾವಿಗೆ ಕಾರಣ ಎಂದು ಬರೆದಿರುವುದರಿಂದ, ಸಾವಿಗೆ ಪ್ರಚೋದನೆ ನೀಡಿದ್ದಾರೆ, ಎಂಬ ಐಪಿಸಿ ಕಾಲಂನಡಿ ಈಶ್ವರಪ್ಪರವರು ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ.
ಕಾಂಗ್ರೆಸ್ ಸರಕಾರ ಇದ್ದಾಗ ಡಿವೈಎಸ್ಪಿ ಗಣಪತಿ ಸಾವು ಪ್ರಕರಣ ದಲ್ಲಿ ಸಚಿವ ಜಾರ್ಜ್ ರಾಜಿನಾಮೆಗೆ ರಾಜ್ಯವ್ಯಾಪಿ ಹೋರಾಟ ಮಾಡಿದ್ದ ಬಿಜೆಪಿ ಇಂದು ಪಲಾಯನ ಸೂತ್ರ ಪಠಿಸುತಿರುವುದು ನಾಚಿಗೆ ಗೇಡು. ಸ್ವತಃ ಸ್ವಪಕ್ಷೀಯರನ್ನೇ ಕಮಿಷನ್ ಕೊಡಲಿಲ್ಲ ಎಂದು ಹಿಂಸಿಸಿ ಇಂದು ಅವರ ಸಾವಿಗೆ ಕಾರಣರಾದ ಸಚಿವ ಈಶ್ವರಪ್ಪ ರವರನ್ನು ಕೂಡಲೇ ಬಂಧಿಸಬೇಕು. ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.