ಒಂದು ಹೆಣ್ಣು ಮಗಳಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಣ್ಣ ಬಯಲು: ಅಶ್ವತ್ಥನಾರಾಯಣ | JANATA NEWS
ಬೆಂಗಳೂರು : ಒಂದು ಹೆಣ್ಣು ಮಗಳಿಂದ ಅವರಿಗೆ ಈಗ ಶೇಪ್ಔಟ್ ಆಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಟಾಂಗ್ ನೀಡಿದರು.
ಅರಮನೆ ಮೈದಾನದಲ್ಲಿ ಲಿಡ್ಕರ್ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಮಾತನಾಡಿ, ಡಿ.ಕೆ. ಶಿವಕುಮಾರ್ ತಾನು ಯಾರಿಗೆ ಬೇಕಾದರೂ ನೋಡಿಕೊಳ್ಳುತ್ತೇನೆ ಎಂದು ಬಿಲ್ಡಪ್ ಕೊಡುತ್ತಿದ್ದರು. ತಮ್ಮದೇ ಪಕ್ಷದ ನಾಯಕ ಎಂ.ಬಿ.ಪಾಟೀಲ್ ಮತ್ತು ನನ್ನ ಹೆಸರು ಹೇಳಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರು. ಆದರೆ ರಮ್ಯಾ ಅವರ ಟ್ವೀಟ್ ಡಿಕೆಶಿ ಬಣ್ಣವನ್ನು ಬಯಲು ಮಾಡಿತು.
ರಾಂಗ್ ನಂಬರ್ ಡಯಲ್ ಮಾಡಿದ ಶಿವಕುಮಾರ್ ಪೆಚ್ಚು ಮೋರೆ ಹಾಕಿಕೊಂಡು ಓಡಾಡಬೇಕಾಗಿದೆ, ಅಶ್ವತ್ಥ್ ನಾರಾಯಣನ ಗೌರವ ಹಾಳು ಮಾಡುತ್ತೇನೆ ಎಂದು ಹೊರಟಿದ್ದರು. ಆದರೆ, ಈಗ ಅವರೇ ಗೌರವ ಕಳೆದುಕೊಂಡು ಆಗಿ ಐಸೋಲೇಟ್ ಆಗಿದ್ದಾರೆ. ರಮ್ಯಾ ಪಾಪ ಹೆಣ್ಣು ಮಗಳು, ಅವರ ಬಗ್ಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ತಿರುಗೇಟು ನೀಡಿದ್ದಾರೆ.
ಅವರದೇ ಪಕ್ಷದ ಹೆಣ್ಣು ಮಗಳ ತೇಜೋವಧೆ ಮಾಡಿದರೆ ಏನಾಗುತ್ತೆ ಎನ್ನುವ ಬಿಸಿ ಶಿವಕುಮಾರ್ಗೆ ಆಗಿದೆ. ವ್ಯಕ್ತಿಯ ಸ್ವಾತಂತ್ರ್ಯ, ಪರಸ್ಪರ ಸಂಬಂಧ, ಸ್ನೇಹ ಪ್ರಶ್ನಿಸುವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಅವರ ಬಗ್ಗೆ ಅವರದೇ ಎಲ್ಲ ನಾಯಕರು ಸಂಪೂರ್ಣ ಖಂಡಿಸಿದ್ದಾರೆ.ಏನೋ ಆಪಾದನೆ ಮಾಡಬೇಕು, ಅದಕ್ಕೊಂದು ಅರ್ಥ ಕಲ್ಪಿಸಿ ದಿಕ್ಕು ತಪ್ಪಿಸಬೇಕು ಅಂತಾ ಹೊರಟಿದ್ದವರಿಗೆ ಅವರ ಪಕ್ಷದವರೇ ತಕ್ಕ ಪಾಠ ಕಲಿಸಿದ್ದಾರೆ. ಇನ್ಮುಂದೆ ಶಿವಕುಮಾರ್ ಇಂತಹ ಮಾತು ಮಾತನಾಡಲ್ಲ ಅಂತಾ ಅನಿಸುತ್ತದೆ. ಈ ರೀತಿಯ ಹೇಳಿಕೆಯ ಮೂಲಕ ಅವರ ವ್ಯಕ್ತಿತ್ವ, ಮನೋಭಾವ ಏನು ಎನ್ನುವುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಹೀಗಾಗಿ, ನನಗೆ ಸಂತೋಷ ಆಗಿದೆ ಎಂದರು.
ಅವರ ಆಂತರಿಕ ವಿಚಾರ, ಆದರೂ ಮಾಧ್ಯಮಗಳು ನನ್ನನ್ನೂ ಇದರಲ್ಲಿ ಸೇರಿಸಿದ್ದೀರಾ. ಡಿಕೆ ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡಿದ್ದು ಅವರ ತಪ್ಪು. ನನ್ನನ್ನು ಟಚ್ ಮಾಡಿ ಅಯ್ಯೋ ಪಾಪ ಅನ್ನೋ ಸ್ಥಿತಿಗೆ ಬಂದಿದ್ದಾರೆ. ಎಂಥ ವ್ಯಕ್ತಿ ಅಧ್ಯಕ್ಷರಾಗಿದ್ದಾರಪ್ಪ ಅನ್ನೋ ಮುಜುಗರ ಕಾಂಗ್ರೆಸ್ ನಾಯಕರಿಗೆ ಆಗಿದೆ. ಅನುಕಂಪ ಒಳ್ಳೆಯವರ ಮೇಲೆ ಇರತ್ತೆ, ಸಜ್ಜನರ ಮೇಲೆ ಇರತ್ತೆ, ಡಿಕೆ ಶಿವಕುಮಾರ್ ಅಂಥವರ ಮೇಲಲ್ಲ. ಅವರದೇ ಪಕ್ಷದ ಹೆಣ್ಣು ಮಗಳ ಮೇಲೆಯೇ ತೇಜೋವಧೆ ಮಾಡಿದರೆ ಏನಾಗತ್ತೆ ಎನ್ನುವ ಬಿಸಿ ಡಿಕೆ ಶಿವಕುಮಾರ್ಗೆ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು ಕೊಟ್ಟಿದ್ದಾರೆ.