ತಮ್ಮನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದ ಅಣ್ಣ | JANATA NEWS
ಬೆಳಗಾವಿ : ತಮ್ಮನನ್ನೇ ಚಾಕುವಿನಿಂದ ಇರಿದು ಅಣ್ಣ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೋಕಾಕದಲ್ಲಿ ತಡರಾತ್ರಿ ನಡೆದಿದೆ.
ಮುನಾಫ್ ದೇಸಾಯಿ (24) ಕೊಲೆಯಾದ ದುರ್ದೈವಿಯಾಗಿದ್ದು, ರಮಜಾನ್ ದೇಸಾಯಿ (26) ತಮ್ಮನನ್ನೇ ಕೊಲೆ ಮಾಡಿದ ಸಹೋದರ.
ನಿನ್ನೆ ಮನೆಯಲ್ಲಿ ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ತಾಯಿಯನ್ನು ಮುನಾಫ್ ಬೈಯ್ಯುತ್ತಿದ್ದನಂತೆ. ಇದನ್ನು ಕಂಡ ಅಣ್ಣ ರಮಜಾನ್, ತಂದೆ ತಾಯಿಯನ್ನು ಯಾಕೆ ಬೈಯ್ತಿಯಾ ಅಂತ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆಯೂ ವಾಗ್ವಾದ ತಾರಕಕ್ಕೇರಿದೆ. ಅಣ್ಣ ಮನೆಯಲ್ಲಿದ್ದ ಚಾಕುವಿನಿಂದ ತಮ್ಮ ಮುನಾಫ್ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮುನಾಫ್ನನ್ನು ಪೋಷಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮುನಾಫ್ ಸಾವನ್ನಪ್ಪಿದ್ದಾನೆ. ತಮ್ಮನ ಹೊಟ್ಟೆಗೆ ಚಾಕು ಇರಿದ ಆರೋಪಿ ರಮಜಾನ್ನನ್ನು ಗೋಕಾಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗೋಕಾಕ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.