ಎಗ್ರೈಸ್ನಲ್ಲಿ ವಿಷ ಬೆರೆಸಿದ ತಂದೆ, ಮಗ ಬಲಿ, ಮಗಳ ಸ್ಥಿತಿ ಚಿಂತಾಜನಕ | JANATA NEWS
ವಿಜಯಪುರ : ತಂದೆಯೇ ಮಕ್ಕಳಿಗೆ ಅನ್ನದಲ್ಲಿ ವಿಷವಿಟ್ಟು ಘಟನೆ ತಾಳಿಕೋಟೆ ತಾಲೂಕಿನ ಗೋನಾಳ ಎಸ್.ಎಚ್. ಗ್ರಾಮದಲ್ಲಿ ನಡೆದಿದೆ.
ಚಂದ್ರಶೇಖರ ಅರಸನಾಳ ಎಂಬಾತ ಕೃತ್ಯ ಎಸಗಿದ್ದು, ಮಗ ಶಿವರಾಜ ಸಾವನ್ನಪ್ಪಿದ್ದು, 5 ವರ್ಷದ ಮಗಳು ರೇಣುಕಾ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ದುಸ್ಥಿತಿಗೆ ನನ್ನ ಗಂಡ ಚಂದ್ರಶೇಖರ ನೀಡಿದ ವಿಷ ಬೆರಸಿದ ಅನ್ನ ತಿಂದದ್ದೇ ಕಾರಣ ಎಂದು ಮಕ್ಕಳ ತಾಯಿ ಸಾವಿತ್ರಿ ದೂರು ನೀಡಿದ್ದಾರೆ.
ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಚಂದ್ರಶೇಖರ ಶಿವಪ್ಪ ಅರಸನಾಳ ಮತ್ತು ಸಾವಿತ್ರಿ ಅವರ ಮದುವೆ ಕೆಲ ವರ್ಷಗಳ ಹಿಂದೆ ಮದುವೆ ಆಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ ಗಂಡ ಸಾಲದ ಸುಳಿಗೆ ಸಿಲುಕಿದ್ದ. ಕಳೆದ 2 ತಿಂಗಳ ಹಿಂದೆ ಮಕ್ಕಳನ್ನು ಸಾವಿತ್ರಿ ತನ್ನ ತವರು ಮನೆಗೆ ಬಿಟ್ಟಿದ್ದಳು. ಅತ್ತ ಸಾಲ ತೀರಿಸಲು ಜಮೀನು ಮಾರಬೇಕು ಎಂದು ಚಂದ್ರಶೇಖರ ಒತ್ತಡ ಹಾಕುತ್ತಿದ್ದ.
ವಿಪರೀತ ಸಾಲ ಮಾಡಿಕೊಂಡಿದ್ದ ನನ್ನ ಪತಿ ಚಂದ್ರಶೇಖರ ಸ್ವಗ್ರಾಮ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದಲ್ಲಿ ಇರುವ ಜಮೀನು ಮಾರಾಟಕ್ಕೆ ಮುಂದಾಗಿದ್ದ. ಮಾಡಿದ ಸಾಲವನ್ನು ದುಡಿದು ತೀರಿಸೋಣ ಜಮೀನು ಮಾರುವುದು ಬೇಡ ಎಂದು ವಿರೋಧಿಸಿದ್ದೆ. ತಾಳಿಕೋಟೆ ತಾಲೂಕಿನ ಗೋನಾಳ ಎಸ್.ಎಚ್. ಗ್ರಾಮದಲ್ಲಿದ್ದಾಗ ಜೂ. 2 ರಂದು ತನ್ನ ಸಹೋದರರಾದ ಬಸಪ್ಪ, ಗುಂಡಪ್ಪ, ಮೌನೇಶ ಜೊತೆ ಅಲ್ಲಿಗೆ ಆಗಮಿಸಿದ್ದ ಪತಿ ಚಂದ್ರಶೇಖರ ಜಮೀನು ಮಾರಲು ನನ್ನ ಮನವೊಲಿಸಲು ಮುಂದಾದರೂ ನಾನು ಒಪ್ಪಿರಲಿಲ್ಲ. ಹೀಗಾಗಿ ನನ್ನ ಭಾವಂದಿರು ಊರಿಗೆ ಮರಳಿದರೂ ಪತಿ ನನ್ನ ತವರೂರಲ್ಲೇ ಉಳಿದಿದ್ದರು ಎಂದು ಹೇಳಿಕೊಂಡಿದ್ದಾರೆ.
ಜಮೀನು ಮಾರಲು ಒಪ್ಪದ ಕಾರಣಕ್ಕೆ ಸಿಟ್ಟಿನಲ್ಲಿ ನನ್ನನ್ನು ಹಾಗೂ ಮಕ್ಕಳನ್ನು ಕೊಲೆ ಮಾಡುವ ಸಂಚು ರೂಪಿಸಿದ ಪತಿ ಚಂದ್ರಶೇಖರ ಸಂಜೆ ಹೊರಗಿನಿಂದ ವಿಷ ಹಾಕಿದ ಎಗ್ ರೈಸ್ ತಂದು ಕೊಟ್ಟಿದ್ದ. ಇದನ್ನು ಮಕ್ಕಳಿಗೆ ತಿನ್ನಿಸಿದ ಕಾರಣ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಕೂಡಲೇ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಎರಡೂವರೆ ವರ್ಷದ ಮಗ ಶಿವರಾಜ ಮೃತಪಟ್ಟಿದ್ದಾನೆ.
ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಾಯಿ ಸಾವಿತ್ರಿ, ಜೂ.3ರಂದೇ ಮಗನ ಸಾವಿನಲ್ಲಿ ಸಂಶಯವಿದೆ ಎಂದು ದೂರು ನೀಡಿದ್ದಳು. ಸಾವಿತ್ರಿ ತವರೂರು ಗೋನಾಳಕ್ಕೆ ಹೋಗಿದ್ದಳು. ಆ ವೇಳೆ ಮನೆಗೆ ಬಂದ ಚಂದ್ರಶೇಖರ, ಸಾಲಕ್ಕೆ ಅಂಜಿ ಸಾಯಲು ನಿರ್ಧರಿಸಿದೆ. ಅದಕ್ಕಾಗಿ ಎಲ್ಲರೂ ಒಟ್ಟಿಗೆ ಸಾಯಲೆಂದು ಎಗ್ರೈಸ್ನಲ್ಲಿ ವಿಷ ಬೆರೆಸಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜೂ.6ರಂದು ತಾಳಿಕೋಟೆ ಠಾಣೆಯಲ್ಲಿ ಚಂದ್ರಶೇಖರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.