ಚಿಕನ್ ಸಾಂಬಾರ್ ಮಾಡಿಲ್ಲವೆಂದು ನಶೆಯಲ್ಲಿ ಇರಿದು ಪತ್ನಿಯನ್ನು ಕೊಂದ ಪತಿ | JANATA NEWS
ದಾವಣಗೆರೆ : ಚಿಕನ್ ಸಾಂಬಾರ್ ಮಾಡಲಿಲ್ಲ ಎಂಬ ಕಾರಣಕ್ಕೆ ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.
28 ವರ್ಷದ ಶೀಲಾ ಎಂಬುವವರೆ ಕೊಲೆಯಾದ ಮಹಿಳೆ, ಬನ್ನಿಕೋಡು ಗ್ರಾಮದ ಕೆಂಚಪ್ಪ ಕೊಲೆ ಮಾಡಿದ ಪತಿ.
ಕಳೆದ 9 ವರ್ಷಗಳ ಹಿಂದೆ ಪ್ರೀತಿ ಮಾಡಿ ಕೆಂಚಪ್ಪನು ಶೀಲಾಳನ್ನು ಮದುವೆಯಾಗಿದ್ದ. ಇದು ಎರಡನೇ ವಿವಾಹವಾಗಿತ್ತು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮಧ್ಯವೆಸನಿಯಾಗಿದ್ದ ಕೆಂಚಪ್ಪ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.
ಕೆಂಚಪ್ಪ ಪತ್ನಿ ಶೀಲಾ ಮೇಲೆ ಪದೇ ಪದೇ ಅನುಮಾನ ಪಡುತ್ತಿದ್ದನಂತೆ.ಕೆಲ ದಿನಗಳ ಹಿಂದೆ ಕೂಡ ಇದೇ ವಿಚಾರಕ್ಕೆ ಜಗಳವಾಗಿದ್ದು, ಕುಡುಗೋಲಿನಿಂದ ಹಲ್ಲೆ ಮಾಡಿದ್ದ. ಆದರೆ ಶೀಲಾ ಪ್ರಾಣಾಪಾಯದಿಂದ ಪಾರಾಗಿದ್ದಳು.
ಕುಡಿದು ಮನೆಗೆ ಬಂದಿದ್ದ ಕೆಂಚಪ್ಪ, ಬರುವಾಗ ಚಿಕನ್ ತಂದು ಸಾಂಬಾರ್ ಮಾಡಿಕೊಡುವಂತೆ ಗಲಾಟೆ ಮಾಡಿದ್ದಾನೆ. ಆಗ ಸಿಟ್ಟಿಗೆದ್ದು ಮನೆಯಲ್ಲಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬಳಿಕ ಹರಿಹರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.