ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ | JANATA NEWS
ಹಾಸನ : ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಹೆಚ್.ಡಿ ದೇವೇಗೌಡರು ಪತ್ರ ಬರೆದಿದ್ದರು.
ಈ ಬಗ್ಗೆ ಸಭೆ ನಡೆಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಎಲ್ಲವೂ ಕೇಶವಕೃಪಾದಲ್ಲಿ ತೀರ್ಮಾನವಾಗುತ್ತದೆ. ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ, ಅವರನ್ನ ನೋಡಿದರೆ ನನಗೆ ಕನಿಕರ ಬರುತ್ತದೆ ಎಂದರು.
ಬೆಂಗಳೂರಿನ ಕೊಮ್ಮಘಟ್ಟ ಸಭೆಯಲ್ಲಿನ ಮಾತುಗಳನ್ನು ಪ್ರಸ್ತಾಪಿಸಿ, ಪ್ರಧಾನಿ ಸ್ಥಾನದಲ್ಲಿ ನಿಂತು ಮಾತನಾಡಬೇಕಾದರೆ ಯೋಚನೆ ಮಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇರೆ ಸರಕಾರಗಳು ಈ ನಾಡಿಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿಕೊಳ್ಳವುದು ದೊಡ್ಡತನ ಎಂದು ಹೇಳಿದರು.
ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಅಭಿವೃದ್ಧಿ ಇರಲಿಲ್ಲ. ಬರಗಾಲವಿತ್ತು. ಅಂದಿನಿಂದ ದೇಶದ ಬೆಳವಣಿಗೆ ಹಲವಾರು ನಾಯಕರು ಕೊಡುಗೆ ಕೊಟ್ಟಿದ್ದಾರೆ. ಬೇರೆ ಸರಕಾರಗಳು ಏನೂ ಮಾಡೇ ಇಲ್ಲ. ಎಲ್ಲಾ ಕಾರ್ಯಕ್ರಮಗಳು ನನ್ನಿಂದ ಆಗಿವೆ ಎನ್ನುವ ಭಾವನೆ ಪ್ರಧಾನಿಗೆ ಇದೆ. ನೆಹರು ಅವರು ಪ್ರಧಾನಿಯಾಗಿದ್ದಾಗ ಕೈಗಾರಿಕೆ, ನೀರಾವರಿಗೆ ಇಟ್ಟಿದ್ದ ಬಜೆಟ್, ಈ ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು ಎಂದರು.
ಬೆಂಗಳೂರು ಅಭಿವೃದ್ಧಿಗೆ 33 ಸಾವಿರ ಕೋಟಿ ರೂ. ವೆಚ್ಚದಲ್ಲಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದರಲ್ಲಿ ಒಬ್ಬರ ಕೊಡುಗೆ ಮಾತ್ರ ಇದೆಯೆ..? ಹಿಂದಿನ ಸರಕಾರಗಳು ಬೆಂಗಳೂರು ಅಭಿವೃದ್ಧಿಗೆ ರೂಪುರೇಷೆಗಳನ್ನು ಸಿದ್ಧಪಡಿಸಿದ್ದವು. 15 ಸಾವಿರ ಕೋಟಿಯ ಸಬರ್ಬನ್ ರೈಲ್ವೆ ಯೋಜನೆಗೆ ಚಾಲನೆ ನೀಡಿದ್ದಾರೆ. 40 ವರ್ಷದಲ್ಲಿ ಆಗಿರಲಿಲ್ಲ, 40 ತಿಂಗಳಿನಲ್ಲಿ ಮಾಡುತ್ತೇನೆ ಎಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ಸರ್ಕಾರದಲ್ಲಿ ಮತ್ತು ದೇವೇಗೌಡರು ಪ್ರಧಾನಿಯಾಗಿದ್ದ ಮಾಡಿದ್ದ ಶಂಕುಸ್ಥಾಪನೆ, ಕಾಮಗಾರಿಯ ಕ್ರೆಡಿಟ್ ನ್ನು ಮೋದಿಯವರು ಈಗ ತೆಗೆದುಕೊಳ್ಳುತ್ತಿದ್ದಾರೆ ಎಂದರು. ವಿರೋಧ ಪಕ್ಷದವರನ್ನು ತೆಗಳುವುದು, ಟೀಕೆ ಮಾಡುವುದು ಬಿಜೆಪಿಯ ಜಾಯಮಾನ, ವಿರೋಧ ಪಕ್ಷಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ವಿರೋಧ ಪಕ್ಷಗಳು ಮಾಡಿರುವ ಉತ್ತಮ ಕೆಲಸಗಳನ್ನು ಸ್ಮರಿಸುವ ಒಳ್ಳೆಯ ಗುಣವೇ ಅವರಿಗಿಲ್ಲ.
ಆಧಾರ್ ಕಾರ್ಡು, ಜಿಎಸ್ ಟಿ, ನರಗಾ ಯೋಜನೆ ತಂದವರ್ಯಾರು ಮನಮೋಹನ್ ಸಿಂಗ್ ಸರ್ಕಾರ ಕೇಂದ್ರದಲ್ಲಿದ್ದಾಗ ಬಂದವು. ಹಲವಾರು ಸರ್ಕಾರಗಳು ಈ ದೇಶದಲ್ಲಿ ಆಡಳಿತ ನಡೆಸಿದ್ದಾಗ ಹಲವಾರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವೆಲ್ಲವನ್ನೂ ಮರೆಮಾಚಿ ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಬಂದ ಮೇಲೆಯೇ ಎಲ್ಲವೂ ಆಯಿತು ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು