ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್ಸಿಪಿ ಪಾಳಯದಲ್ಲಿ ಅಸಮಧಾನ | JANATA NEWS
ಮುಂಬೈ : ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿದರೆ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರವನ್ನು ತೊರೆಯಲು ಸಿದ್ಧ, ಎಂದು ಮಹಾರಾಷ್ಟ್ರ ವಿಕಾಸ್ ಅಘಾಡಿ(ಎಂವಿಪಿ) ಮೈತ್ರಿಕೂಟದ ನೇತೃತ್ವದ ಶಿವಸೇನಾ ಪಕ್ಷದ ಸಂಸದ ಸಂಜಯ್ ರಾವುತ್ ಅವರ ಹೇಳಿಕೆಯು ಮಿತ್ರಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ಗೆ ಅಸಮಾಧಾನವನ್ನುಂಟು ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, “ನೀವು ನಿಜವಾದ ಶಿವಸೈನಿಕರು ಮತ್ತು ಪಕ್ಷವನ್ನು ತೊರೆಯುವುದಿಲ್ಲ ಎಂದು ಹೇಳುತ್ತೀರಿ. ನೀವು 24 ಗಂಟೆಗಳಲ್ಲಿ ಮುಂಬೈಗೆ ಹಿಂತಿರುಗಿ ಮತ್ತು ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಸಮಸ್ಯೆಯನ್ನು ಚರ್ಚಿಸಿದರೆ ನಿಮ್ಮ ಬೇಡಿಕೆಯನ್ನು ಪರಿಗಣಿಸಲು ನಾವು ಸಿದ್ಧರಿದ್ದೇವೆ. ನಿಮ್ಮ ಬೇಡಿಕೆಯನ್ನು ಧನಾತ್ಮಕವಾಗಿ ಪರಿಗಣಿಸಲಾಗುವುದು. ಟ್ವಿಟರ್ ಮತ್ತು ವಾಟ್ಸಾಪ್ನಲ್ಲಿ ಪತ್ರ ಬರೆಯಬೇಡಿ," ಎಂದು ಹೇಳಿದ್ದರು.
“ಮುಂಬೈನಿಂದ ಹೊರಗಿರುವ ಬಂಡಾಯ ಶಾಸಕರು ಹಿಂದುತ್ವದ ವಿಷಯವನ್ನು ಎತ್ತಿದ್ದಾರೆ. ಈ ಎಲ್ಲಾ ಶಾಸಕರು ಶಿವಸೇನೆ ಎಂವಿಎಯಿಂದ ಹೊರನಡೆಯಬೇಕು ಎಂದು ಭಾವಿಸಿದರೆ, ಮುಂಬೈಗೆ ಹಿಂತಿರುಗುವ ಧೈರ್ಯವನ್ನು ತೋರಿಸಿ...ನಿಮ್ಮ ಬೇಡಿಕೆಯನ್ನು ಪರಿಗಣಿಸಲಾಗುವುದು. ಆದರೆ, ಬಂದು ಉದ್ಧವ್ ಠಾಕ್ರೆ ಜೊತೆ ಮಾತನಾಡಿ” ಎಂದು ಅವರು ಸೇರಿಸಿದರು.
ಆದಾಗ್ಯೂ, ಈ ಹೇಳಿಕೆಗಳು ಮಿತ್ರಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ಗೆ ಸರಿ ಹೋಗಲಿಲ್ಲ, ಮತ್ತು ಮೂಲಗಳ ಪ್ರಕಾರ, ಎನ್ಸಿಪಿ ಶಾಸಕರು ಅಸಮಧಾನ ವ್ಯಕ್ತಪಡಿಸಿದ್ದು, ಪಕ್ಷದ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದರು.
ಕಾಂಗ್ರೆಸ್ ಕೂಡ ರಾವುತ್ ಅವರ ಹೇಳಿಕೆಗಳಿಂದ ಸಂತಸಗೊಂಡಿಲ್ಲ ಮತ್ತು ಸಂಜೆ ಸಭೆ ನಡೆಸಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಕಾಂಗ್ರೆಸ್ ಮತ್ತು ಎನ್ಸಿಪಿ ಗುರುವಾರ ಮಹಾರಾಷ್ಟ್ರದ ಆಡಳಿತ ಸಮ್ಮಿಶ್ರ ಮಹಾ ವಿಕಾಸ್ ಅಘಾಡಿಯನ್ನು ಬೆಂಬಲಿಸುವುದಾಗಿ ತಿಳಿಸಿವೆ, ಮೈತ್ರಿಕೂಟವನ್ನು ತೊರೆಯಲು ಸಿದ್ಧ ಎಂದು ಮಿತ್ರಪಕ್ಷ ಶಿವಸೇನೆ ಹೇಳಿದ ಗಂಟೆಗಳ ನಂತರ.
ಎಂವಿಪಿ ಸರ್ಕಾರವನ್ನು ಬಿಕ್ಕಟ್ಟಿನಲ್ಲಿ ಸಿಲುಕಿಸಿರುವ ಬಂಡಾಯ ಶಾಸಕರ ಮುಖಂಡ ಶಿಂದೆ ಪ್ರಸ್ತುತ 40 ಶಾಸಕರೊಂದಿಗೆ ಗುವಾಹಟಿಯಲ್ಲಿ ಉಳಿದುಕೊಂಡಿದ್ದಾರೆ.
ಈ ಮೂಲಕ, 288 ಸದಸ್ಯರ ವಿಧಾನಸಭೆಯಲ್ಲಿ ಸಿಎಂ ಉದ್ಧವ್ ಕೇವಲ 15 ಶಾಸಕರ ಬೆಂಬಲದೊಂದಿಗೆ ಉಳಿದಂತಾಗಲಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿ ಮೈತ್ರಿಕೂಟವನ್ನು ರಚಿಸಲು, ಶಿವಸೇನೆಯು 55 ಶಾಸಕರನ್ನು ಹೊಂದಿತ್ತು, ಮಿತ್ರಪಕ್ಷಗಳಾದ ಎನ್ಸಿಪಿ 53 ಮತ್ತು ಕಾಂಗ್ರೆಸ್ 44 ಸಂಖ್ಯಾಬಲ ಇತ್ತು. ಆದರೆ ಶಿಂಧೆ 40 ಕ್ಕೂ ಹೆಚ್ಚು ಶಾಸಕರ ಬೆಂಬಲವನ್ನು ಪ್ರತಿಪಾದಿಸುವುದರೊಂದಿಗೆ, ಠಾಕ್ರೆ ತಂಡಕ್ಕೆ ತನ್ನ ಬಹುಮತವನ್ನು ಸಾಬೀತುಪಡಿಸುವುದು ಕಷ್ಟಕರವಾಗಿದೆ.