ದೇವೇಗೌಡರು ನಾಲ್ಕರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: ರಾಜಣ್ಣ ವಿವಾದಾತ್ಮಕ ಹೇಳಿಕೆ | JANATA NEWS
ತುಮಕೂರು : ಮಾಜಿ ಪ್ರಧಾನಿ ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲೇ ಇದೆ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಿದ್ದಾರೆ. ಇನ್ನು ನಾಲ್ವರ ಮೇಲೆ ಹೋಗುವ ಸಮಯ ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ನಾಯಕ ಕೆ. ಎನ್. ರಾಜಣ್ಣ ಲೇವಡಿ ಮಾಡಿದ್ದಾರೆ.
ದೇವೇಗೌಡರು ಇಬ್ಬರು ಮೇಲೆ ಹಾಕ್ಕೊಂಡು ಹೋಗ್ತಾವ್ರೇ.. ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು.. ಎಂದು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಕೆ. ಎನ್. ರಾಜಣ್ಣ ಹೇಳಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆಡಿಎಸ್ ವರಿಷ್ಠ ದೇವೇಗೌಡರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಈ ಹೇಳಿಕೆ ವಿಡಿಯೋಗಳು ವೈರಲ್ ಆಗಿವೆ.
ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆ. ಎನ್. ರಾಜಣ್ಣ, ಇದು ನನ್ನ ಕೊನೆಯ ಚುನಾವಣೆ. ಶೋಕಿಗೆ, ಮುಖಸ್ತುತಿಗೆ ರಾಜಕಾರಣ ಮಾಡೋದು ಬೇಡ. ನಾನು ಎಂಎಲ್ಎ ಆದ್ರೆ ನೀವೆಲ್ಲಾ ಎಂಎಲ್ಎ ಇದ್ದಂಗೆ. ನೀವು ಹೋರಾಟ ಮಾಡಿ ನಾನು ಎಂಎಲ್ಎ ಆದ್ರೆ ನಾನು ಸುಮ್ಮನೆ ನಾಮಕಾವಸ್ಥೆಗೆ ಇರ್ತೀನಿ. ಏನಾದ್ರೂ ಕೆಲಸ ಆಗಬೇಕಾದ್ರೆ ನೀವೇ ಅಧಿಕಾರಿಗಳನ್ನ ಕೇಳೋ ಶಕ್ತಿ ನಿಮಗೆ ಬರುತ್ತೆ ಎಂದು ಕೆ. ಎನ್. ರಾಜಣ್ಣ ಹೇಳಿದರು.
ಮುಂದಿನ ದಿನಗಳಲ್ಲಿ ಪ್ರತಿ ಮನೆ ಬಾಗಿಲಿಗೂ ಬಂದು ವೋಟ್ ಕೇಳ್ತೀನಿ. ಇದು ನನ್ನ ಕೊನೆ ಎಲೆಕ್ಷನ್, ಮುಂದೆ ನೀವು ನಿಂತ್ಕೋ ಅಂದ್ರೂ ನಾನು ನಿಲ್ಲಲ್ಲ. ನನಗೆ ಆಗಲೇ 72 ವರ್ಷ, 77 ಆದ್ರೆ ಕೈ ಕಾಲು ಅಲಾಡ್ತಿರುತ್ತೆ. ಸರ್ಕಾರ ಬಂದ್ರೆ ನೂರಕ್ಕೆ ನೂರರಷ್ಟು ಮಂತ್ರಿ ಆಗ್ತೀನಿ ಎಂದ ಕೆ. ಎನ್. ರಾಜಣ್ಣ, ಇದೇ ಮಾತಿನ ಭರದಲ್ಲಿ ‘ದೇವೇಗೌಡರು ಇಬ್ಬರು ಮೇಲೆ ಹಾಕ್ಕೊಂಡು ಹೋಗ್ತಾವ್ರೇ’ ಎಂದು ಹೇಳಿ ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿದ ಕೆ. ಎನ್. ರಾಜಣ್ಣ, ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.