ಉತ್ತರಕನ್ನಡ ಹಲವು ಭಾಗಗಳಲ್ಲಿ ಶನಿವಾರ ಬೆಳಗ್ಗೆಯಿಂದ ಧಾರಾಕಾರವಾಗಿ ಮಳೆ : ಜನ ಜೀವನ ಅಸ್ತವ್ಯಸ್ತ | JANATA NEWS
ಕಾರವಾರ : ಉತ್ತರಕನ್ನಡ ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಶನಿವಾರ ಬೆಳಗ್ಗೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕೆಲವು ಕಡೆ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಹೊನ್ನಾವರದ ಗುಂಡಬಾಳ ನದಿಗೆ ಪ್ರವಾಹ ಬಂದಿದೆ. ಸ್ಥಳಕ್ಕೆ ಎಸ್.ಡಿ.ಆರ್.ಎಫ್ ತಂಡ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಅಪಾಯದಲ್ಲಿದ್ದ 32 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಹೊನ್ನಾವರದ ಚಿಕ್ಕನಕೋಡ, ಕೆಕ್ಕಾರ ಮತ್ತು ಹೊಸಾಕುಳಿ ಗ್ರಾಮಗಳು ಜಲಾವೃತವಾಗುವ ಭೀತಿ ಎದುರಿಸುತ್ತಿದೆ. ಈಗಾಗಲೇ ಈ ಗ್ರಾಮಗಳ 68 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಕಾರವಾರದ ಹಬ್ಬುವಾಡಾ, ಕೆಎಚ್ಬಿ ಸೇರಿದಂತೆ ಹಲವು ಕಡೆ ರಸ್ತೆಯ ಮೇಲೆ ನೀರು ನಿಂತು ಜನ ಪರದಾಡುವಂತಾಗಿದೆ. ಜಿಲ್ಲೆಯ ಭಟ್ಕಳ ಸೇರಿದಂತೆ ಕೆಲ ತಾಲೂಕುಗಳಲ್ಲಿಯೂ ಸಹ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.
ಸುಪಾ, ಬೊಮ್ಮನಹಳ್ಳಿ, ತಟ್ಟಿಹಳ್ಳ, ಕೊಡಸಳ್ಳಿ ಹಾಗೂ ಕದ್ರಾ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳಿಗೆ ಒಳ ಹರಿವು ಸಹ ಹೆಚ್ಚಿದೆ. ಕದ್ರಾ ಜಲಾಶಯದ ಒಳಹರಿವು ಸಹ ಹೆಚ್ಚಿದ್ದು, ಹೀಗಾಗಿ ಜಲಾಶಯದ ಹೊರ ಹರಿವನ್ನೂ ಸಹ ಅದೇ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಜಲಾಶಯದ ಎಂಟು ಗೇಟ್ಗಳನ್ನು ತೆರೆದು 40,331 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗಿದೆ.
ಬೊಮ್ಮನಹಳ್ಳಿ ಜಲಾಶಯದ ಎರಡು ಗೇಟ್ ತೆರೆದು 9156 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗಿದೆ. ಜಲಾನಯ ಪ್ರದೇಶದಲ್ಲಿ ಇದೇ ರೀತಿ ಸತತ ಮಳೆಯಾದಲ್ಲಿ, ಇನ್ನೂ ಹೆಚ್ಚಿನ ನೀರನ್ನು ಜಲಾಶಯದಿಂದ ಹೊರಬಿಡುವ ಸಾಧ್ಯತೆಯಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಭಟ್ಕಳ ಹಾಗೂ ಹೊನ್ನಾವರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.