ಉತ್ತರಕನ್ನಡ; ಮುಂದುವರೆದ ಮಳೆ 14 ಕಾಳಜಿ ಕೇಂದ್ರ ಸ್ಥಾಪನೆ | JANATA NEWS
ಕಾರವಾರ : ಉತ್ತರಕನ್ನಡ ಜಿಲ್ಲೆಯಾದ್ಯಂತ ಶನಿವಾರ ಸಂಜೆವರೆಗೂ ಸಹ ಧಾರಾಕಾರ ಮಳೆಯಾಗುತ್ತಿದೆ. ಕುಮಟಾ ಹಾಗೂ ಹೊನ್ನಾವರ ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ.
ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ೪೭ ಮನೆಗಳು ಭಾಗಶಃ, ೬ ಮನೆಗಳು ಸಂಪೂರ್ಣ ಹಾನಿಯಾಗಿದೆ. ನೆರೆಗೆ ಸಿದ್ದಾಪುರದಲ್ಲಿ ಒಂದು ಸಾವು ಸಂಭವಿಸಿದೆ. ಸತತ ಮಳೆಗೆ ಹೊನ್ನಾವರ ಹಾಗೂ ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು ೧೪ ಕಾಳಜಿ ಕೇಂದ್ರಗಳನ್ನು ತೆರೆಯಾಗಿದೆ. ೧೬೨ ಕುಟುಂಬಗಳ ೩೩೪ ಸದಸ್ಯರು ಈ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೆಂದ್ರ ಮಾಹಿತಿ ನೀಡಿದೆ.
ಹೊನ್ನಾವರದ ಗುಂಡಬಾಳ ನದಿಗೆ ಪ್ರವಾಹ ಬಂದಿದ್ದು, ಹತ್ತಿರದ ಗ್ರಾಮಗಳು ಜಲಾವೃತವಾಗಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಹೊನ್ನಾವರ ಬಳಿ ಗೇರುಸೊಪ್ಪ ಸಮೀಪದ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-೬೯ ರಲ್ಲಿ ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಕೆಳಭಾಗದ ಗುಡ್ಡ ಕುಸಿದ್ದರಿಂದ ಅರ್ಧದಷ್ಟು ರಸ್ತೆಯೂ ಕುಸಿತವಾಗಿದೆ. ಇದರಿಂದಾಗಿ ಹೊನ್ನಾವರದಿಂದ ಗೇರುಸೊಪ್ಪ ಮಾರ್ಗವಾಗಿ ಸಿದ್ದಾಪುರ, ತಾಳಗುಪ್ಪಕ್ಕೆ ಸಂಚರಿಸುವ ಮಾರ್ಗ ಕಡಿತವಾಗಿದೆ.
ಗೇರುಸೊಪ್ಪ ಗ್ರಾಮದಿಂದ ಸಿದ್ದಾಪುರ ತಾಲ್ಲೂಕಿನ ಮಾವಿನಗುಂಡಿ ಗ್ರಾಮದವರೆಗೆ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ಹೊನ್ನಾವರದಿಂದ ಸಿದ್ದಾಪುರ, ಜೋಗ, ಸಾಗರ ಕಡೆಗೆ ಹೋಗುವ ವಾಹನಗಳು ಕುಮಟಾ- ಸಂತೆಗುಳಿ ಮಾರ್ಗವಾಗಿ ಸಿದ್ದಾಪುರಕ್ಕೆ ತೆರಳಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.